ಸಂತ ಮಾರ್ಕ, ಸುಸಂದೇಶಕರ್ತ

ಮಧ್ಯರಾತ್ರಿಯ ಹೊತ್ತು. ಗೆತ್ಸೆಮನಿ ತೋಪಿನಲ್ಲಿ ಪ್ರಾರ್ಥನೆಯನ್ನು ಮುಗಿಸಿ ಬಂದ ಯೇಸುವನ್ನು ಅವರ ವಿರೋಧಿಗಳಾದ ಕೆಲವು ಯೆಹೂದ್ಯರು ಬಂಧಿಸುತ್ತಾರೆ. ಅವರ ಜೊತೆಯಲ್ಲಿದ್ದ ಶಿಷ್ಯರು ಅಲ್ಲಿಂದ ಪಲಾಯನಗೈಯುತ್ತಾರೆ. ಬಂಧನದ ಬಳಿಕ ಯೇಸುವಿನ ಸುತ್ತ ಇದ್ದುದು ವಿರೋಧಿಗಳ ಬಣ. ಬಂಧಿಸಲಾದ ಯೇಸುವನ್ನು ತೋಪಿನಿಂದ ಹೊರಕ್ಕೆ ಕರೆದೊಯ್ಯುತ್ತಿದ್ದಂತೆಯೇ ಒಂದು ಘಟನೆ ಸಂಭವಿಸುತ್ತದೆ. ವಿರೋಧಿಗಳ ಬಣದ ಹಿಂದೆ ಹಿಂದೆಯೇ ಮೈಮೇಲೆ ದುಪ್ಪಟಿಯನ್ನು ಮಾತ್ರ ಹೊದ್ದು ಕೊಂಡಿದ್ದ  ಓರ್ವ ತರುಣ ಅವರನ್ನು ಹಿಂಬಾಲಿಸಿ ನಡೆಯುತ್ತಾನೆ. ಯೆಹೂದ್ಯರು ಆ ಕತ್ತಲೆಯಲ್ಲಿ ಅವನನ್ನು ಗಮನಿಸುತ್ತಾರೆ. ಸಂದೇಹಗೊಂಡ ಅವರು ಆತನನ್ನು ಹಿಡಿಯಲು ಪ್ರಯತ್ನಿಸುತ್ತಾರೆ. ಅವರಿನ್ನೇನು ಆತನನ್ನು ಹಿಡಿದುಕೊಂಡರು ಎನ್ನುವಷ್ಟರಲ್ಲೇ ಹೊದ್ದುಕೊಂಡಿದ್ದ ದುಪ್ಪಟಿಯನ್ನು ಅವರ ಕೈಯಲ್ಲೇ ಬಿಟ್ಟು ದಿಗಂಬರನಾಗಿ ಆ ತರುಣ ಅಲ್ಲಿಂದ ಪಲಾಯನಗೈಯುತ್ತಾನೆ1.

ಈ ಘಟನೆಯು ಸುಸಂದೇಶದಲ್ಲಿ ಸ್ಪಷ್ಟವಾಗಿ ಮೂಡಿ ಬಂದಿದೆ. ಇದು ಕಂಡುಬರುವುದು ಮಾರ್ಕನ ಸುಸಂದೇಶದಲ್ಲಿ!

ಹೀಗೆ ದುಪ್ಪಟಿಯನ್ನು ಬಿಟ್ಟು ಬೆತ್ತಲೆಯಾಗಿ ಓಡಿ ಹೋದ ಆ ತರುಣ ಯಾರಿರಬಹುದು? ಎಂಬ ಕುತೂಹಲ ಸಹಜವಾಗಿ ಯಾರಲ್ಲೂ ಮೂಡಬಹುದು. ಮಾರ್ಕನ ಸುಸಂದೇಶವನ್ನು ಹೊರತುಪಡಿಸಿ ಇನ್ಯಾವ ಕೃತಿಯಲ್ಲೂ ಈ ಘಟನೆ ಕಂಡು ಬರುವುದಿಲ್ಲ. ಆ ತರುಣ ಬೇರಾರೂ ಅಲ್ಲ!! ಸ್ವಯಂ ಮಾರ್ಕನೇ ಆತ! ಎಂಬುದಕ್ಕೆ ಬೇರಾವ ತರ್ಕದ ಅವಶ್ಯಕತೆಯೂ ಇಲ್ಲಿ ಕಾಣಿಸುವುದಿಲ್ಲ. ಉಳಿದ ಯಾವ ಸುಸಂದೇಶಗಳಲ್ಲೂ ಕಂಡು ಬರದ ಈ ಸನ್ನಿವೇಶ ಮಾರ್ಕನ  ಕೃತಿಯಲ್ಲಿರುವುದೇ ಅದಕ್ಕೆ ಸಾಕ್ಷಿ. ಕೃತಿಯಲ್ಲಿ ತನ್ನ ಹೆಸರನ್ನು ಎಲ್ಲೂ ಪ್ರಕಟಿಸದೆ ರಚನೆಯಾದ ಕೃತಿಯನ್ನು ತನ್ನದು ಎಂಬುದನ್ನು ಸೂಚಿಸುವ ಸಲುವಾಗಿ ಸ್ವಯಂ ಬರಹಗಾರನೇ ಕೃತಿಯಲ್ಲಿ ಉಳಿಸಿದ ಪುರಾವೆಯದು.

ಇಂತಹದೇ ಇನ್ನೊಂದು ಪುರಾವೆಯು ಮಾರ್ಕನ ಕೃತಿಯಲ್ಲಿ ಕಾಣಸಿಗುತ್ತದೆ. ಈ ಸಂಗತಿಯನ್ನು ಉಳಿದ ಮೂರು ಸುಸಂದೇಶಗಳಲ್ಲಿಯೂ ಕಾಣಬಹುದಾದರೂ ಮಾರ್ಕನ ಕೃತಿಯಲ್ಲಿ ಅದನ್ನು ವಿವರಿಸಿದ ರೀತಿ ತುಸು ಭಿನ್ನವಾಗಿಯೇ ಇದೆ!

'ಯೇಸುವಿನ ಶಿಷ್ಯರು ಪಾಸ್ಕ ಹಬ್ಬದ ಕುರಿಯನ್ನು ಕೊಯ್ಯುವ ದಿನ ಯೇಸುವಿನ ಬಳಿ ಬಂದು, “ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ದಪಡಿಸಬೇಕೆನ್ನುತ್ತೀರಿ?” ಎಂದು ಕೇಳುತ್ತಾರೆ. ಅದಕ್ಕೆ ಯೇಸುವು, “ನೀವು ಪಟ್ಟಣಕ್ಕೆ ಹೋಗಿರಿ. ಅಲ್ಲಿ ‘ನೀರಿನ ಕೊಡವನ್ನು ಹೊತ್ತವನು ನಿಮ್ಮನ್ನು ಎದುರುಗೊಳ್ಳುವನು. ಅವನ ಹಿಂದೆಯೇ ಹೋಗಿ ಅವನು ಯಾವ ಮನೆಗೆ ಹೋಗುತ್ತಾನೋ ಆ ಮನೆಯ ಯಜಮಾನನಿಗೆ,  ‘ನಮ್ಮ ಗುರು, ತಮ್ಮ ಶಿಷ್ಯರ ಜೊತೆ ಪಾಸ್ಕ ಭೋಜನ ಮಾಡಲು ತಮಗೆ ಕೊಠಡಿ ಎಲ್ಲಿ? ಎಂದು ಕೇಳುತ್ತಾರೆ ಎಂದು ವಿಚಾರಿಸಿರಿ. ಅವನು ಮೇಲುಪ್ಪರಿಗೆಯಲ್ಲಿ ಸಿದ್ದವಾಗಿರುವ ಹಾಗೂ ಸುಸಜ್ಜಿತವಾದ ದೊಡ್ಡ ಕೊಠಡಿಯನ್ನು ತೋರಿಸುವನು. ಅಲ್ಲಿ ನಮಗಾಗಿ ಊಟವನ್ನು  ಸಿದ್ದಮಾಡಿರಿ ಎನ್ನುವರು’2, ಎಂಬ ಈ ವಿವರಣೆಯನ್ನು ಮಾರ್ಕನು ನೀಡಿದ್ದಾನೆ.

ಇಲ್ಲಿ ‘ನೀರಿನ ಕೊಡ ಹೊತ್ತವನು ಎಂಬ ಪದಗುಚ್ಛ ಉದ್ದೇಶಪೂರ್ವಕವಾಗಿಯೇ ಸೇರಿಸಿಕೊಂಡಂತೆ ಇದೆ. ಇದು ಉಳಿದ ಸುಸಂದೇಶಗಳಲ್ಲಿ ಇಲ್ಲ. ಇದೂ ಸಹ ಆ ವ್ಯಕ್ತಿ ಮಾರ್ಕನೇ ಎಂಬುದನ್ನು ಸೂಚಿಸುತ್ತದೆ. ಇನ್ನು ಯೇಸುವಿಗಾಗಿ ಪಾಸ್ಕಭೋಜನಕ್ಕೆ ಸಿದ್ದ ಪಡಿಸಿದ ಕೋಣೆ ಬೇರೆ ಯಾರದ್ದೂ ಅಲ್ಲ, ಅದು ಸ್ವಯಂ ಮಾರ್ಕನ ತಂದೆಯದು. ಯೇಸುವಿನ ಶಿಷ್ಯರು ಮಾತನಾಡಿದ ಮನೆಯ ಯಜಮಾನನೇ ಮಾರ್ಕನ ತಂದೆ!

ಈ ಮನೆಯ ಕುರಿತು ಪ್ರೇಷಿತರ ಕಾರ್ಯಕಲಾಪ ಕೃತಿಯಲ್ಲಿಯೂ ವಿವರಗಳಿವೆ. ಯೇಸುವಿನ ಮಾತೆ, ಸಹೋದರರೂ ಸೇರಿದಂತೆ ಪ್ರೇಷಿತರ ಮೇಲೆ ಪವಿತ್ರಾತ್ಮನು ಇಳಿದು ಬರುವುದು ಇಲ್ಲೇ ಎಂದು ಹೇಳಲಾಗುತ್ತಿದೆ. ಪೇತ್ರನು ದೇವದೂತನ ಸಹಾಯದಿಂದ ಬಿಡುಗಡೆಗೊಂಡ ಬಳಿಕ ಧಾವಿಸಿ ಬಂದದ್ದು ಇದೇ ಮನೆಗೆ3. ಈ ಮನೆ ‘ಮರಿಯ ಎಂಬವಳಿಗೆ ಸೇರಿದ್ದು, ಈಕೆ ‘ಮಾರ್ಕ ಎಂದು ಹೆಸರುಗೊಂಡಿದ್ದ ‘ಯೊವಾನ್ನನ ತಾಯಿ4 ಎಂದು ‘ಪ್ರೇಷಿತರ ಕಾರ್ಯಕಲಾಪ ಎಂಬ ಕೃತಿಯಲ್ಲಿ ದಾಖಲಾಗಿದೆ.
***

ಯೇಸುಕ್ರಿಸ್ತರ ಜನನಾನಂತರದ ಸುಮಾರು ಹದಿನೈದು ವರ್ಷಗಳ ತರುವಾಯ ಹುಟ್ಟಿದ ಮಾರ್ಕನ ಪೂರ್ಣ ಹೆಸರು 'ಯೊವಾನ್ನ ಮಾರ್ಕ'5. ಹುಟ್ಟಿದ ಊರು ಪಶ್ಚಿಮ ಲಿಬ್ಯದ ಸಿರೇನ್ಯ(ಪ್ರಸಕ್ತ 'ಷಹತ್' ನಗರ). ತಂದೆ ಅರಿಸ್ಟೊಪೊಲೊಸ್, ತಾಯಿ ಮೇರಿ.

ಯೆಹೂದಿಗಳಾದ ಇವರು ತಮ್ಮ ತಾಯಿನಾಡಾದ ಪ್ಯಾಲೆಸ್ಟೀನ್‌ಗೆ ಮರಳಿ ಬಂದು ಜೆರುಸಲೇಂನಲ್ಲಿ ನೆಲೆನಿಲ್ಲುತ್ತಾರೆ. ಅಲ್ಲಿ ಅರಿಸ್ಟೊಪೊಲೋಸನಿಗೆ ಯೇಸುವಿನ ಶಿಷ್ಯ ಸಿಮೋನ್ ಪೇತ್ರನ ಪರಿಚಯವಾಗುತ್ತದೆ. ಅರಿಷ್ಟೊಪೊಲೋಸ್ ಮರಣಾನಂತರ(ಬಹುಶಃ ಯೇಸುವಿನ ಶಿಲುಬೆಯ ಮರಣದ ಬಳಿಕವೇ ಇರಬೇಕು), ಆ ಕುಟುಂಬಕ್ಕೆ ಆಸರೆಯಾಗುವುದು ಯೇಸುವಿನ ಶಿಷ್ಯರಲ್ಲಿ ಒಬ್ಬನಾದ ಸೈಮನ್ ಪೇತ್ರ. ಬಳಿಕ ಮಾರ್ಕನ ಪಾಲನೆ ಪೋಷಣೆಯ ಹೊಣೆಯನ್ನು ಸ್ವಯಂ ಪೇತ್ರನೇ ಹೊರುತ್ತಾನೆ6.

ಯೇಸುವಿನ ಮರಣ ಮತ್ತು ಸ್ವರ್ಗಾರೋಹಣದ ನಂತರ ಧರ್ಮಪ್ರಚಾರದ ಕಾರ್ಯಕ್ಷೇತ್ರವಾಗಿ ಪರಿವರ್ತಿಸಲ್ಪಟ್ಟಿದ್ದು ಅರಿಸ್ಟೊಪೊಲೋಸನ ಮನೆ. ಹೀಗಾಗಿ ಆ ಮನೆಯಲ್ಲಿದ್ದ ಮಾರ್ಕನಿಗೆ ಧರ್ಮಪ್ರಚಾರ ಕಾರ್ಯದಲ್ಲಿ ಸ್ವಾಭಾವಿಕವಾಗಿಯೇ ಆಸಕ್ತಿ ಮೂಡುತ್ತದೆ. ಆದರೆ ಆಗ ಮಾರ್ಕನದು ಕಿರಿಯ ವಯಸ್ಸು.  ವಯಸ್ಸಿಗೆ ಸಹಜವಾದ ಹೊಣೆಗೇಡಿತನ, ತುಂಟತನಗಳು ಅವನಲ್ಲಿ ಇದ್ದವು. ಜೊತೆಗೆ ಬೇಜವಾಬ್ದಾರಿತನ ಮೈಹೊತ್ತು ನಿಂತಿತ್ತು. ಗಾಂಭೀರ್ಯವೆಂಬುದು ಅವನಲ್ಲಿ ಲವಲೇಶವೂ ಇರಲಿಲ್ಲ. ಆರಂಭಶೂರತ್ವದ ಹುಡುಗು ಬುದ್ದಿ ಅವನದಾಗಿತ್ತು. ಹೀಗಿದ್ದಾಗ ಮಾರ್ಕನು ತನ್ನನ್ನು ನಂಬಿದವರ ಕೈಬಿಟ್ಟು ಮತ್ತೊಮ್ಮೆ ಓಡಿಹೋಗುವ ಘಟನೆಯೊಂದು ಸಂಭವಿಸುತ್ತದೆ.

ಜೆರುಸಲೇಂ ಭೀಕರ ಕ್ಷಾಮಕ್ಕೆ ತುತ್ತಾದಾಗ ನೆರವು ನೀಡಲು ಬಾರ್ನಬನೆಂಬವನು ಪೌಲನೊಂದಿಗೆ ಅಲ್ಲಿಗೆ ಧಾವಿಸುತ್ತಾನೆ. ಈ ಬಾರ್ನಬನ ಮೂಲ ಹೆಸರು ಜೋಸೆಫ್7. ಯೇಸು ಶಿಲುಬೆ ಮರಣವನ್ನು ಹೊಂದಿದ ಬಳಿಕ ಯೇಸುವಿನ ಅನುಯಾಯಿಗಳನ್ನು ಹಿಂಸಿಸುತ್ತಿದ್ದ ಪೌಲ8, ಆಗಷ್ಟೆ ಯೇಸುವಿನ ಪ್ರಭಾವಕ್ಕೆ ಒಳಗಾಗಿ ಪರಿವರ್ತನೆ ಹೊಂದಿದ್ದ ಸಮಯವದು. ಅವನು ಯೇಸುವಿಗಾಗಿ ಈಗ ಪ್ರಾಣ ಕೊಡಲೂ ಸಿದ್ಧನಾಗಿದ್ದ. ಜೆರುಸಲೇಂಗೆ ಆಗಮಿಸಿದ ಪೌಲನನ್ನು ಪೇತ್ರನಿಗೂ ಸೇರಿದಂತೆ ಉಳಿದೆಲ್ಲಾ ಪ್ರೇಷಿತರಿಗೂ ಬಾರ್ನಬನು ಪರಿಚಯಿಸುತ್ತಾನೆ. ಮಾರ್ಕನಿಗೆ ಪೌಲನ ಪರಿಚಯವಾಗುವುದು9 ಆಗಲೇ; ಅದಕ್ಕೆ ಕಾರಣ ಬಾರ್ನಬ. ಅವನು ಮಾರ್ಕನ ಸೋದರ ಸಂಬಂಧಿ9ಯೆಂಬುದು ಗಮನಿಸಬೇಕಾದ ಅಂಶ.

ಮುಂದೆ ಪೌಲ, ಬಾರ್ನಬ ಮತ್ತು ಮಾರ್ಕರು ಒಟ್ಟುಗೂಡಿ ಅನೇಕ ಸಂಸ್ಥಾನಗಳಲ್ಲಿ ಧರ್ಮಪ್ರಚಾರ ಕಾರ್ಯಗಳನ್ನು ಕೈಗೊಳ್ಳುತ್ತಾರೆ.  ಆದರೆ ಪೊಂಫಿಲಿಯಾ ಬಳಿಯ ಪೆರ್ಗ ಎಂಬಲ್ಲಿ ಪೌಲ ಮತ್ತು ಬಾರ್ನಬರು ಧರ್ಮಪ್ರಚಾರ ಕೈಗೊಳ್ಳಬೇಕಾಗಿದ್ದ ಸಂದರ್ಭದಲ್ಲಿ ಮಾರ್ಕನು ಅವರಿಬ್ಬರನ್ನೂ ಅಲ್ಲೇ ಬಿಟ್ಟು ಜೆರುಸಲೇಮಿಗೆ ಹಿಂದಿರುಗಿ ಹೋಗುತ್ತಾನೆ10.

ಈ ಘಟನೆ ಪೌಲನನ್ನು ಕೆರಳುವಂತೆ ಮಾಡುತ್ತದೆ. ಹೀಗಾಗಿ ಮುಂದೊಮ್ಮೆ ಇದೇ ರೀತಿಯ ಧರ್ಮಪ್ರಚಾರ ಕಾರ್ಯದಲ್ಲಿ ಮಾರ್ಕನು ಆಸಕ್ತಿ ತೋರಿದಾಗ, ಬಾರ್ನಬನು ಅದೆಷ್ಟೇ ಶಿಫಾರಸ್ಸು ಮಾಡಿದರೂ ಮಾರ್ಕನನ್ನು ಕರೆದೊಯ್ಯಲು ಪೌಲನು ಸುತರಾಂ ಒಪ್ಪುವುದಿಲ್ಲ. ಇದು ಬಾರ್ನಬ ಮತ್ತು ಪೌಲರ ನಡುವಿನ ಮನಸ್ತಾಪಕ್ಕೂ ಕಾರಣವಾಗುತ್ತದೆ. ಆ ನಂತರ ಬಾರ್ನಬ ಮತ್ತು ಮಾರ್ಕರು ಪೌಲನಿಂದ ಬೇರೆಯಾಗಿ ಧರ್ಮಪ್ರಚಾರ ಕಾರ್ಯ ಕೈಗೊಳ್ಳುತ್ತಾರೆ11.

ಆ ನಂತರದ ದಿನಗಳಲ್ಲಿ ಮಾರ್ಕನು ಗಮನಾರ್ಹವಾಗಿ ಬದಲಾಗುತ್ತಾನೆ. ಕೈಗೊಂಡ ಪ್ರಚಾರಕಾರ್ಯಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸುತ್ತಾನೆ. ಮಾರ್ಕನ ಅದ್ಭುತವಾದ ಕಾರ್ಯಚಟುವಟಿಕೆಗಳನ್ನು ಕಂಡು ಪೌಲನೂ ಸಹ ಪ್ರಸನ್ನನಾಗುತ್ತಾನೆ. ಹಳೆಯ ಕೋಪ ಮಾಯವಾಗುತ್ತದೆ. ಪೌಲನು ತಿಮೋಥೆಯನಿಗೆ ಬರೆದ ಪತ್ರದಲ್ಲಿ, ‘ನೀನು ಬರುವಾಗ ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ. ಅವನ ಸೇವೆ ನನಗೆ ಅಗತ್ಯವಾಗಿದೆ,’ ಎಂದು ವಿನಂತಿಸುವಷ್ಟರ ಮಟ್ಟಿಗೆ ಮಾರ್ಕನು ಪೌಲನ ಮನಸ್ಸನ್ನು ಗೆಲ್ಲುತ್ತಾನೆ12.

ಕ್ರಿ.ಶ.60ರಲ್ಲಿ ಮಾರ್ಕನೂ ಸಹ ಪೌಲನೊಂದಿಗೆ ಸೆರೆವಾಸವನ್ನು ಅನುಭವಿಸುತ್ತಾನೆ. ಆಗ ಪೌಲನೊಂದಿಗೆ ಸೆರೆಯಾಳಾಗಿದ್ದ ಇತರ ಐವರಲ್ಲಿ ಮಾರ್ಕ ಮತ್ತು ಲೂಕರೂ ಇದ್ದರು ಎನ್ನುವುದಕ್ಕೆ ಪೌಲನು ಫಿಲೆಮೋನನಿಗೆ ಬರೆದ ಪತ್ರವೇ ಸಾಕ್ಷ್ಯಾಧಾರ13

ಮುಂದೆ ಮಾರ್ಕನು ಪೇತ್ರನ ಕಾರ್ಯದರ್ಶಿಯೂ, ದ್ವಿಭಾಷಿಯೂ ಆಗಿ ಕಾರ್ಯವನ್ನು ನಿರ್ವಹಿಸುತ್ತಾನೆ. ಈ ನಡುವೆ ‘ಸುಸಂದೇಶವೆಂಬ ಕೃತಿಯ ರಚನೆಯಲ್ಲೂ ಅವನು ತೊಡಗುತ್ತಾನೆ. ಗ್ರೀಕ್ ಭಾಷೆಯಲ್ಲಿ ರಚಿಸಲ್ಪಟ್ಟ ಆತನ ಕೃತಿಯು ಪೂರ್ಣಗೊಂಡದ್ದು ಕ್ರಿ.ಶ. 60-65ರ ನಡುವಿನಲ್ಲಿ; ಕೃತಿ ರಚನೆಯಾದದ್ದು ರೋಂ ನಗರದಲ್ಲಿ ಪೌಲನ ಬಂಧನದ ನಂತರ.

ಮಾರ್ಕನ ಸುಸಂದೇಶವೆಂಬುದು ಸುಸಂದೇಶ ಪುಸ್ತಕಗಳಲ್ಲೇ ಅತ್ಯಂತ ಕಿರಿದಾದ ಹಾಗು ಸರಳ ವಿವರಣೆಗಳಿರುವ ಒಂದು ಕೃತಿ. 'ದೇವರಪುತ್ರರಾದ ಯೇಸುಕ್ರಿಸ್ತರ ಶುಭಸಂದೇಶ' ಎಂಬ ಸಂದೇಶದೊಂದಿಗೆ ಕೃತಿಯ ಪುಟಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಯೇಸುವಿನ ಪ್ರೌಢಾವಸ್ಥೆಯ ಕೊನೆಯ ನಾಲ್ಕು ವರ್ಷಗಳ(ಕ್ರಿ.ಶ.29ರಿಂದ ಕ್ರಿ,ಶ,33ರವರೆಗಿನ) ಅವಧಿಯಲ್ಲಿ ಸಂಭವಿಸಿದ ಘಟನೆಗಳನ್ನು ಮಾತ್ರವೇ ಒಳಗೊಂಡಿರುವ ಈ ಕೃತಿಯು, ಸ್ನಾನಿಕ ಯೊವಾನ್ನನ ಪ್ರಕರಣದಿಂದ ಆರಂಭಗೊಂಡು ಯೇಸುವಿನ ಸ್ವರ್ಗಾರೋಹಣದೊಂದಿಗೆ ಮುಕ್ತಾಯಗೊಳ್ಳುತ್ತದೆ.

ತನ್ನ ಕೃತಿಯಲ್ಲಿ ಸ್ನಾನಿಕ ಯೊವಾನ್ನನ ಪರಿಚಯಕ್ಕೆ ಮೊದಲು ವಿಶಿಷ್ಟ ಮುನ್ನುಡಿಯಾಗಿ ಯೆಶಾಯ ಪ್ರವಾದಿಯ ಪ್ರವಾದನೆಯ ವಾಕ್ಯಗಳನ್ನು ನೀಡಿ, ಮಾರ್ಕನು ನೇರವಾಗಿ ಸುಸಂದೇಶವನ್ನು ಆರಂಭಿಸಿದ್ದಾನೆ. 'ದೇವರಪುತ್ರ', 'ದೇವಕುಮಾರ' ಎಂಬ ಪದಗಳ ಬಳಕೆ ಹೆಚ್ಚಾಗಿ ಮಾರ್ಕನ ‘ಸುಸಂದೇಶದಲ್ಲಿ ಕಂಡುಬರುತ್ತದೆ. ಯೇಸುವಿನ ಪರ್ವತ ಪ್ರಸಂಗ ಮತ್ತಿತರ ಬೋಧನೆಗಳನ್ನು ಸಂಪೂರ್ಣವಾಗಿ ಮಾರ್ಕನು ಕೈಬಿಟ್ಟಿದ್ದು, ಕೆಲವೇ ಕೆಲವು ಸಾಮತಿಗಳ ಜೊತೆಗೆ ಕನಿಷ್ಟ ಹತ್ತೊಂಬತ್ತು ಪವಾಡಗಳನ್ನು ತನ್ನ ಕೃತಿಯಲ್ಲಿ ದಾಖಲಿಸಿದ್ದಾನೆ. ಉಳಿದ ಸುಸಂದೇಶಗಳಲ್ಲಿ ಇರುವಂತೆಯೇ ಮಾರ್ಕನ ಕೃತಿಯಲ್ಲಿಯೂ ಕೆಲವು ಹೊಸತಾದ ವಿವರಗಳು ಕಾಣಲು ಸಿಗುತ್ತವೆ. ಅವುಗಳು ಇಂತಿವೆ; ಯೇಸು ಗಲಿಲೇಯ ಪ್ರಾಂತ್ಯದಲ್ಲಿ ಸುತ್ತಾಡಿ ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಪ್ರಬೋಧನೆ ನೀಡಿ ದೆವ್ವಗಳನ್ನು ಬಿಡಿಸುತ್ತಾ ಬಂದದ್ದು, ಯೇಸುವಿನ ಜನಪ್ರಿಯತೆ, ದೀಪ ಮತ್ತು ದೀಪಸ್ಥಂಭದ ಮಹತ್ವ, ಬಿತ್ತನೆ ಬೀಜದ ಹೋಲಿಕೆ, ಬೆತ್ಸಾಯಿದದ ಕುರುಡನಿಗೆ ದೃಷ್ಟಿದಾನ ನೀಡಿದ್ದು, ಬಡ ವಿಧವೆಯ ಉದಾರ ಕಾಣಿಕೆ, ಪುನರುತ್ಥಾನರಾದ ಯೇಸು ಶಿಷ್ಯರಿಬ್ಬರಿಗೆ ದರ್ಶನ ನೀಡಿದ್ದು ಇತ್ಯಾದಿ. ಇವುಗಳಲ್ಲಿ ಕೆಲವನ್ನು ಲೂಕನು ತನ್ನ ಗ್ರಂಥದಲ್ಲಿಯೂ ಅಳವಡಿಸಿಕೊಂಡಿದ್ದಾನೆ. ಲೂಕನ ಕೃತಿ ಮಾರ್ಕನ ಕೃತಿಗಿಂತ ಮೊದಲೇ ಸೃಷ್ಟಿಯಾಗಿದ್ದರೂ ಮತ್ತಾಯನ ಕೃತಿಯನ್ನು ಅಭ್ಯಸಿಸಿ, ಮಾರ್ಕನು ಬರೆದಿರಿಸಿದ ಟಿಪ್ಪಣಿಗಳನ್ನು ಪರಾಮರ್ಶೀಸಿ, ಅವುಗಳ ಆಧಾರದ ಮೇಲೆ; ಆ ಸಂಗತಿಗಳ ಬಗ್ಗೆ ಪರಿಶೀಲನೆ ಮತ್ತು ಅವಲೋಕನಗಳನ್ನು ಮಾಡಿ ಬಳಿಕ ಆಯಾ ಸ್ಥಳಗಳ ಜನರನ್ನು ಕಂಡು ವಿವರಗಳನ್ನು ಕೇಳಿ ತಿಳಿದು ಮನದಟ್ಟುಮಾಡಿಕೊಂಡ ಬಳಿಕ ಸೃಷ್ಟಿಯಾದದ್ದು ಎಂಬುದಿಲ್ಲಿ ಗಮನಾರ್ಹ. ಉಳಿದಂತೆ ಹೆಚ್ಚಿನ ವಿವರಗಳನ್ನು ಮಾರ್ಕನು ತನ್ನ ಕೃತಿಯಲ್ಲಿನ ವಿವರಗಳನ್ನು ಟಿಪ್ಪಣಿಯಂತೆ ಸಂಕ್ಷಿಪ್ತವಾಗಿ ಹೇಳಿ, ಅಷ್ಟೇ ಸರಳವಾಗಿ ಕೃತಿಯನ್ನು ಮುಕ್ತಾಯಗೊಳಿಸಿದ್ದಾನೆ.

'ಮಾತಿಗಿಂತ ಕೃತಿಯೇ ಮೇಲು' ಎಂಬ ವಾದ ಮಾರ್ಕನದಾಗಿರಬೇಕು; ಹಾಗಾಗಿ ಯೇಸುವಿನ ಮಾತುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡದೆ ಅವರು ಸಾಧಿಸಿದ ಕಾರ್ಯಗಳ ಕುರಿತ ವಿವರಗಳಿಗೆ ಹೆಚ್ಚು ಒತ್ತು ನೀಡಿದ್ದಾನೆ. ಮತ್ತಾಯನ ಸುಸಂದೇಶವು ತನ್ನನ್ನು ಅವಗಣನೆಗೆ ಈಡುಮಾಡಿದ್ದ ಯೆಹೂದ್ಯರಿಗಾಗಿ ಬರೆದ ಕೃತಿಯಾದರೆ, ಮಾರ್ಕನು ರೋಮನರನ್ನು ಗಮನದಲ್ಲಿರಿಸಿ ಸುಸಂದೇಶವನ್ನು ಬರೆದಂತೆ ಕಾಣಿಸುತ್ತದೆ. ಏಕೆಂದರೆ ಗ್ರೀಕ್ ಭಾಷೆಯ ಈ ಕೃತಿಯಲ್ಲಿ ಯೇಸು ಉಚ್ಚರಿಸಿದ ಅರಾಮೈಕ್ ಭಾಷೆಯ ಪದಗಳನ್ನೂ ಬಳಸಿದ್ದಲ್ಲದೆ ಅದಕ್ಕೆ ಅರ್ಥವನ್ನು ನೀಡುವ ಪ್ರಯತ್ನ ಮಾಡಿದ್ದಾನೆ. ಉದಾ. ‘ಬೊವರ್ನೆಗೆಸ್-‘ಸಿಡಿಲಮರಿಗಳು’, ‘ತಲಿತಾಕೂಮ್-‘ಮಗಳೇ, ಎದ್ದೇಳು’, ‘ಕೊರ್ಬಾನ್-‘ದೇವರಿಗೆ ಮುಡಿಪು, ‘ಎಪ್ಪಥಾ-‘ತೆರೆಯಲಿ’, ‘ಗೊಲ್ಗೊಥ-‘ಕಪಾಲ ಸ್ಥಳ’, ‘ಎಲೋಹಿ, ‘ಎಲೋಹಿ, ಲಮಾ ಸಬಕ್ತಾನಿ-‘ನನ್ನ ದೇವರೇ, ನನ್ನ ದೇವರೇ, ನನ್ನನ್ನೇಕೆ ಕೈ ಬಿಟ್ಟಿದ್ದೀರಿ’, ಇತ್ಯಾದಿ.

ಸರಳವಾದ ಕೃತಿಯ ಅಂತ್ಯವು ಮಾತ್ರ ಕೊಂಚ ಗೋಜಲಾದಂತೆ ಕಾಣಿಸುತ್ತದೆ. ಸುಸಂದೇಶದ ಅಂತ್ಯದ ಮೂರು ಪ್ಯಾರಾಗಳು ಕೃತಿಯ ಘನತೆಯನ್ನೇ ಕೆಡವಿ ಬಿಡುತ್ತದೆ. ಅವು ಅನಗತ್ಯವಾಗಿ ಕೃತಿಯಲ್ಲಿ ಸೇರಿಕೊಂಡಂತೆ ಭಾಸವಾಗುತ್ತದೆ. ಆ ಪ್ಯಾರಾಗಳನ್ನು ಮಾರ್ಕನು ಬರೆದದ್ದೇ ಅಥವಾ ಅಲ್ಲವೇ ಎಂಬ ಸಂಶಯಕ್ಕೂ ಕಾರಣವಾಗುತ್ತದೆ. ಯೇಸುವಿನ ಸ್ವರ್ಗಾರೋಹಣದೊಂದಿಗೆ ಕೃತಿ ಮುಕ್ತಾಯವಾಗಬೇಕಿದ್ದು ಅದರಲ್ಲಿನ ಅಂತಿಮ ಮೂರು ಪ್ಯಾರಾಗಳ ಸೇರ್ಪಡೆಯಿಂದಾಗಿ ಅನಾವಶ್ಯಕವಾಗಿ ಎಳೆದಂತೆ ಗೋಚರಿಸುತ್ತದೆಯಲ್ಲದೆ ಕೊಂಚ ಅಸಂಬದ್ಧವಾಗಿಯೂ ಕಾಣಿಸುತ್ತದೆ. ಈ ವಾಕ್ಯಗಳಿಗೆ ಸಂಖ್ಯೆಗಳನ್ನೂ ನೀಡಿಲ್ಲ(ಲಭ್ಯವಿರುವ ಒಂದು ಮಾಹಿತಿಯ ಪ್ರಕಾರ ಪುರಾತನ ಹಸ್ತಪ್ರತಿಗಳಲ್ಲಿ ಅಂತಿಮ ಮೂರು ಪಂಕ್ತಿಗಳು ಇರುವುದಿಲ್ಲ. ಉದಾ:  ಹಸ್ತ ಪ್ರತಿ ವ್ಯಾಟಿಕನ್‌ ಸಂ.1209).

ಪ್ರಸ್ತುತ ಕೃತಿಯಲ್ಲಿ, ಒಟ್ಟು 16 ಅಧ್ಯಾಯಗಳಿದ್ದು, ಕೊನೆಯ ಮೂರು ಪಂಕ್ತಿಗಳನ್ನು ಹೊರತುಪಡಿಸಿದಂತೆ 678 ಸಂಖ್ಯಾರೂಪದ ವಾಕ್ಯಗಳನ್ನು ಇದು ಹೊಂದಿದೆ. ಇದನ್ನು ಸರಿಸುಮಾರು 1330 ಪದಗಳನ್ನು ಮಾತ್ರವೇ ಬಳಸಿ ರಚಿಸಲಾಗಿದೆಯೆಂದರೆ ಇದರ ಗಾತ್ರ ಎಷ್ಟಿರಬಹುದು ಎಂದು ಊಹಿಸಬಹುದು.

ಕ್ರಿ.ಶ.48ರ ಸುಮಾರಿನಲ್ಲಿ ಮಾರ್ಕನು ಈಜಿಪ್ಟ್ ದೇಶದ ಅಲೆಕ್ಸಾಂಡ್ರಿಯಾದಲ್ಲಿ ಸುಸಂದೇಶವನ್ನು ಸಾರುವುದರ ಮೂಲಕ ಅಲ್ಲಿ ಕ್ರೈಸ್ತಮತದ ಉಗಮಕ್ಕೆ ಕಾರಣನಾಗುತ್ತಾನೆ. ವಿಪರ್ಯಾಸವೆಂದರೆ  ಮಾರ್ಕನು ಹುತಾತ್ಮನಾಗುವುದೂ ಅಲ್ಲೇ. ಸುಮಾರು ಕ್ರಿ.ಶ.68ರಲ್ಲಿ ಅಲೆಕ್ಸಾಂಡ್ರಿಯಾದ ಸೆರಾಪಿಯನ್ ಅಬ್ಬಿಸ್ ಎಂಬ ದೇವತೆಯ ಆರಾಧಕರು ಮಾರ್ಕನನ್ನು ಕುದುರೆಯ ಬಾಲಕ್ಕೆ ಕಟ್ಟಿ ಎರಡು ದಿನಗಳ ಕಾಲ ಊರ ರಸ್ತೆಗಳಲ್ಲಿ ಎಳೆದಾಡಿದ್ದರಂತೆ. ಆಗ ಛಿದ್ರಗೊಂಡ ಮಾರ್ಕನ ದೇಹದ ಅವಶೇಷಗಳಲ್ಲಿ ತಲೆಯನ್ನು ಅಲೆಕ್ಸಾಂಡ್ರಿಯಾದ ಸಂತ ಮಾರ್ಕನ ಚರ್ಚಿನಲ್ಲೂ, ಇನ್ನುಳಿದ ಅವಶೇಷಗಳಲ್ಲಿ ಕೆಲವನ್ನು ಕೈರೋದಲ್ಲಿರುವ ಸಂತ ಮಾರ್ಕನ ಚರ್ಚಿನಲ್ಲೂ ಹಾಗೂ ಉಳಿದವನ್ನು ಇಟಲಿಯ ವೆನಿಸ್‌ನಲ್ಲಿರುವ ಸ್ಯಾನ್ ಮಾರ್ಕೋ ಪ್ರಧಾನಾಲಯದಲ್ಲೂ ಇರಿಸಲಾಗಿದೆಯೆಂದು ಹೇಳಲಾಗುತ್ತಿದೆ. ಮತ್ತೊಂದು ಮಾಹಿತಿಯ ಪ್ರಕಾರ ವೆನಿಸ್‌ನ ಜನರು* ಕ್ರಿ.ಶ.828ರಲ್ಲಿ ಮಾರ್ಕರ ತಲೆಯನ್ನು ಅಲೆಕ್ಸಾಂಡ್ರಿಯಾದಿಂದ ಕದ್ದು ತಂದು, ವೆನಿಸ್‌ನ ಚಚ್‌ನಲ್ಲಿ ಇರಿಸಿದರಂತೆ. ಆ ನಂತರವೇ ವೆನಿಸ್ ನಗರವು ಸಂಪದ್ಭರಿತವಾಯಿತೆಂದು ಹೇಳಲಾಗುತ್ತಿದೆ.

ಮಾರ್ಕನನ್ನು 'ಸಿಂಹ ಹೃದಯದ ಮಾರ್ಕ' ಎಂದೂ ಕರೆಯುತ್ತಾರೆ. ಒಂದು ಹೇಳಿಕೆಯ ಪ್ರಕಾರ; ಮಾರ್ಕನನ್ನು ವಿರೋಧಿಗಳು ಸಿಂಹದ ಬೋನಿಗೆ ಎಸೆದರಂತೆ. ಆದರೆ ಬೋನಿನಲ್ಲಿದ್ದ ಸಿಂಹಗಳು ಮಾರ್ಕನನ್ನು ನೋಡಿಯೂ ನೋಡದಂತೆ ಸುಮ್ಮನಾದವಂತೆ. ಹೀಗಾಗಿ ಮುಂದೆ ಮಾರ್ಕನ ಪ್ರತಿರೂಪದ ಜೊತೆಗೆ ಸಿಂಹವನ್ನು ಗುರುತಿಸುವುದು ಚಾಲ್ತಿಗೆ ಬಂದಿದೆ ಎನ್ನಲಾಗುತ್ತಿದೆ.

ಏಪ್ರಿಲ್ 25ರಂದು ಸಂತ ಮಾರ್ಕರ ಹಬ್ಬವನ್ನು ಆಚರಿಸಲಾಗುತ್ತದೆ. ಇವರನ್ನು 'ಲೇಖಕರ ಪಾಲಕ'ರೆಂದು ಗೌರವಿಸಲಾಗುತ್ತದೆ.


______________________   
* ಒಂದು ಮಾಹಿತಿಯ ಪ್ರಕಾರ, ಒಮ್ಮೆ ಮಾರ್ಕನು ಇಟಲಿಗೆ ಹೋಗುತ್ತಿದ್ದಾಗ, ಭವ್ಯ ಕಾಲುವೆಗಳ ನಗರವೆನಿಸಿದ ವೆನಿಸ್ ನಗರದ ಬಳಿಯ ಉಪ್ಪು ನೀರಿನ ಹರವಿನೊಳಕ್ಕೆ ಪ್ರವೇಶಿಸಿದನಂತೆ. ಆಗ ಆತನಿಗೆ ದೇವದೂತರು ಕಾಣಿಸಿಕೊಂಡು, 'Pax tibi Marce, evangelista meus. Hic requiescet corpus tuum(ಶಾಂತಿಯು ನಿನ್ನೊಂದಿಗಿರಲಿ. ಸುಸಂದೇಶಕರ್ತ  ಮಾರ್ಕನೇ, ನಿನ್ನ ದೇಹವು ಇಲ್ಲಿಯೇ ವಿಶ್ರಾಂತಿಯನ್ನು ಪಡೆಯುವುದು)' ಎಂದು ಹೇಳಿದರಂತೆ. ಇದೇ ಕಾರಣಕ್ಕೆ ಮಾರ್ಕನ ದೇಹದ ಅವಶೇಷಗಳನ್ನು ಇಲ್ಲಿಯ ಸ್ಯಾನ್ ಮಾರ್ಕೋ ಪ್ರಧಾನ ದೇವಾಲಯದಲ್ಲಿ ತಂದು ಇರಿಸಲಾಗಿದೆಯೆಂದು ಹೇಳಲಾಗುತ್ತಿದೆ. ಅಂತೆಯೇ, ಸಂತರನ್ನು ವೆನಿಸ್ ನಗರದ ಪಾಲಕ ಸಂತರನ್ನಾಗಿ ಮಾಡಲಾಗಿದೆ. ರೆಕ್ಕೆಗಳಿರುವ ಸಿಂಹ ಇವರ  ಚಿಹ್ನೆ, ಅದು ವೆನಿಸ್ ನಗರದ ಅಧಿಕೃತ ಹಾಗೂ ಪ್ರತಿಷ್ಟೆಯ ಚಿಹ್ನೆಯೂ ಹೌದು!


 
1) ಮಾರ್ಕ 14:50-52, 2) ಮಾರ್ಕ 14:12-15, 3, 4ಮತ್ತು 5ಪ್ರೇ.ಕಾ.12:13, 6) 1ಪೇತ್ರ5:13, 7) ಪ್ರೇ.ಕಾ.4:36 ಮತ್ತು 1:23, 
8) ಪ್ರೇ.ಕಾ.8:1-40, 9:1-19, 9)  ಪ್ರೇ.ಕಾ.11:30, 10) ಪ್ರೇ.ಕಾ.13:13, 11)ಪ್ರೇ.ಕಾ.15 36-41, 12) 2ತಿಮೊ.4:11, 13)ಫಿಲೆ. 1:23-24,  ಕೊಲೊ.4:10 .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ