ಸಂತ ಲೂಕ, ಸುಸಂದೇಶಕರ್ತ

ಲೂಕ' ಎಂಬ ಹೆಸರು, ಗ್ರೀಕ್‌ ಪದವಾದ 'ಲೂಕಸಸ್‌' ಅಥವಾ 'ಲೂಕಾಸ್‌'ನ ಸಂಕ್ಷಿಪ್ತ ರೂಪವಾಗಿದೆ. ಸಿರಿಯಾದ 'ಅಂತಿಯೋಕ'ದವನಾದ ಲೂಕ, ಮೂಲತಃ ವೈದ್ಯ. ಈತ ಸಂತ ಪೌಲನ ಗೆಳೆಯನೂ ಹೌದು. ಇದನ್ನು ಪೌಲನು ಫಿಲೆಮೋನನಿಗೆ ಬರೆದ ಪತ್ರದ ಕೊನೆಯ ಸಾಲುಗಳಲ್ಲಿ ವಿಶದಪಡಿಸದ್ದಾನೆ. ಲೂಕನು ವೈದ್ಯನಾಗಿದ್ದ ಎಂಬುದಕ್ಕೆ ಪುರಾವೆಯು ಪೌಲನು ಕೊಲೆಸ್ಸೆಯರಿಗೆ ಬರೆದ ಪತ್ರ(೪:೧೪)ದಲ್ಲಿದೆ. 'ತನ್ನ ಜೊತೆ ಇದ್ದವರು ತನ್ನಿಂದ ದೂರ ಸರಿದರೂ ಲೂಕನು ಮಾತ್ರ ತನ್ನೊಂದಿಗೆ ಇದ್ದಾನೆ' ಎಂಬುದನ್ನು ಪೌಲನು ತಿಮೋಥೇಯನಿಗೆ ಬರೆದ ದ್ವಿತೀಯ ಪತ್ರ(೪:೧೧)ದಲ್ಲಿ ತಿಳಿಸಿದ್ದಾನೆ.

ತಾವು ನಂಬಿ ವಿಶ್ವಾಸಿಸಿದ ಕರ್ತ ಯೇಸುವಿನ ಧಾರ್ಮಿಕ ಸೇವೆಯ ವಿವರಗಳನ್ನು ಇತರರಿಗೂ ತಲುಪುವ ಹಾಗೆ 'ಶುಭಸಂದೇಶ'ವೆಂಬ ಸಾಂಕೇತಿಕ ನಾಮದಲ್ಲಿ ಕೃತಿಗಳನ್ನು ರಚಿಸಿದ ನಾಲ್ವರಲ್ಲಿ ಲೂಕನೂ ಒಬ್ಬ. ಅವರಲ್ಲಿ ಯೊವಾನ್ನನು ಯೇಸುವಿನ ಆಪ್ತಶಿಷ್ಯನಾಗಿದ್ದ. ಯೇಸುವಿನ ಅಂತರಾಳವನ್ನು ಬಲ್ಲವನೂ ಆಗಿದ್ದ. ಮತ್ತಾಯನಂತೂ ಯೇಸುವಿನ ಮೊಟ್ಟಮೊದಲ ಶಿಷ್ಯ; ಈತನಿಗೆ ಯೇಸುವಿನ ಮೇಲೆ ಅಪಾರವಾದ ವಿಶ್ವಾಸ ಹಾಗೂ ಕೃತಾರ್ಥತೆ ಇತ್ತು. ಇನ್ನು ಮಾರ್ಕನ ಬಗ್ಗೆ ಹೇಳುವುದಾದರೆ ಅವನ ಸಾಕು ತಂದೆಯಾದ ಪೇತ್ರ ಯೇಸುವಿನ ಆಪ್ತಶಿಷ್ಯರುಗಳಲ್ಲಿ ಒಬ್ಬನಾಗಿದ್ದ; ಸಹಜವಾಗಿಯೇ ಯೇಸುವಿನ ಒಡನಾಟ ಮಾರ್ಕನಿಗಿರುತ್ತದೆ. ಆದರೆ ಲೂಕ ಯೇಸುವಿನ ಶಿಷ್ಯನಾಗಿರಲಿಲ್ಲ. ಯೇಸುವಿನೊಂದಿಗಿನ ಒಡನಾಟಕ್ಕೆ ಆತನಿಗೆ ಅವಕಾಶವಿರಲಿಲ್ಲ. ಪ್ರಾಯಶಃ ಯೇಸು ಶಿಲುಬೆಯ ಮರಣವನಪ್ಪುವವರೆಗೂ ಯೇಸುವಿನ ಬಗ್ಗೆ ಲೂಕನಿಗೆ ಅರಿವಿರುವ ಸಾಧ್ಯತೆ ಇಲ್ಲ. ಅಲ್ಲದೆ ಯೇಸುವೂ ಸೇರಿದಂತೆ ಅವರ ಹನ್ನೆರಡು ಮಂದಿ ಶಿಷ್ಯಂದಿರು ಯೆಹೂದ್ಯರಾಗಿದ್ದರು. ಆದರೆ ಲೂಕ ಯೆಹೂದ್ಯನೂ ಆಗಿರಲಿಲ್ಲ. ಆದರೂ ಈತ ಅನ್ಯಮತವನ್ನು ತೊರೆದು ಕ್ರೈಸ್ತಮತವನ್ನಪ್ಪುತ್ತಾನೆ. ಯೇಸುವೇ ತನ್ನ ರಕ್ಷಕನೆಂದು ತಿಳಿಯುತ್ತಾನೆ. ಇದಕ್ಕೆ ಪ್ರೇರೇಪಣೆ ಪೌಲ. ಪ್ರಾಯಶಃ ಯೇಸುವಿನ ಮರಣಾನಂತರದ ಸಮಯದಲ್ಲಿ, ಯೇಸುವಿನ ಶುಭಸಂದೇಶವನ್ನು ಸಾರಲು ಕಂಕಣಬದ್ಧರಾಗಿ ಹೊರಟವರಲ್ಲಿ ವೃತ್ತಛೇದನ ಮಾಡಿಸಿಕೊಳ್ಳದ, ಯೆಹೂದ್ಯನೂ ಅಲ್ಲದ ಪ್ರೇಷಿತ, ಲೂಕನೊಬ್ಬನೇ ಆಗಿರಬೇಕು ಎಂದೆನಿಸುತ್ತದೆ.

ಲೂಕನ ಸುಸಂದೇಶ ರಚನೆಯಾದದ್ದು ಸೆಜಾ಼ರಿಯಾದಲ್ಲಿ, ಕ್ರಿ.ಶ. ಸುಮಾರು ೫೬-೫೮ರಲ್ಲಿ. ಪೌಲನು ಲೂಕನ ಸಂಗಡ ಫಿಲಿಪಿಯಾದಿಂದ ಹಿಂದಿರುಗಿದ ಬಳಿಕ ಸೆಜಾ಼ರಿಯಾದಲ್ಲಿ ಬಂಧನಕ್ಕೀಡಾದಾಗ ಚಕ್ರವರ್ತಿ ಸೇಜ಼ರನಿಗೆ ಅಪೀಲುಹೋದ ಪೌಲನು ಎರಡು ವರ್ಷ ರೋಂನಲ್ಲಿ ಕಾಯಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಆ ಅವಧಿಯಲ್ಲಿ ಲೂಕನು ತನ್ನ ಕೃತಿಯ ರಚನೆಯಲ್ಲಿ ತೊಡಗಿರಬೇಕು. ಸುಸಂದೇಶಗಳಲ್ಲೇ ಕ್ರಿಸ್ತ ಯೇಸುವಿನ ಬಗೆಗಿನ ಹೆಚ್ಚಿನ ಮಾಹಿತಿಗಳು ಅಡಕಗೊಂಡಿರುವ ಹಿರಿದಾದ ಕೃತಿ ಇದಾಗಿದೆ. ಈ ಕೃತಿಯಲ್ಲಿ ಒಟ್ಟು ೨೪ ಅಧ್ಯಾಯಗಳು ಇವೆ. ೧೧೪೭ ಸಂಖ್ಯಾರೂಪದ ವಾಕ್ಯಗಳನ್ನು ಈ ಕೃತಿಯು ಹೊಂದಿದೆ. ಅತ್ಯಂತ ದೊಡ್ಡ ಅಧ್ಯಾಯ ೧ ಮತ್ತು ಸಣ್ಣ ಅಧ್ಯಾಯ ೧೬.

ಕ್ರಿ.ಪೂ. ೩ರಿಂದ ಕ್ರಿ.ಶ. ೩೩ರ ಕಾಲಘಟ್ಟದಲ್ಲಿ ನಡೆದ ಘಟನೆಗಳನ್ನು ಅಳವಡಿಸಿ ಲೂಕನು ತನ್ನ ಸುಸಂದೇಶವನ್ನು ರಚಿಸಿದ್ದಾನೆ. ಇದರಲ್ಲಿ  ಯೇಸುವಿನ ಜನನಕ್ಕೂ ಮುಂಚಿನ ವಿವರಗಳಿವೆ. ಮುಂದುವರಿದು ಉಳಿದ ಸುಸಂದೇಶಗಳಲ್ಲಿರುವಂತೆಯೇ ಸಾಮತಿಗಳ ಮೂಲಕ ದೇವರಸಾಮ್ರಾಜ್ಯವನ್ನು ಶಿಷ್ಯರಿಗೆ ಬೋಧಿಸುತ್ತಾ ಗಲಿಲೇಯದಿಂದ ಜೆರುಸಲೇಮಿಗೆ ಬಂದು, ಬಂಧಿತರಾಗಿ, ಶಿಲುಬೆಯ ಮರಣವನಪ್ಪಿ, ಪುನರುತ್ಥಾನರಾಗಿ, ಸ್ವರ್ಗಾರೋಹಣವಾಗುವವರೆಗಿನ ಘಟನೆಗಳನ್ನು ಕ್ರಮಬದ್ಧವಾಗಿ ತನ್ನ 'ಸುಸಂದೇಶ'ವೆಂಬ ಕೃತಿಯಲ್ಲಿ ಅಳವಡಿಸಿದ್ದಾನೆ.  ಇದು ಸುಸಂದೇಶವೆಂಬ ಕೃತಿಗೆ ಸಂಬಂಧಿಸಿದ್ದಾದರೆ, ಯೇಸುವಿನ ಸ್ವರ್ಗಾರೋಹಣದ ನಂತರ ಪವಿತ್ರಾತ್ಮಭರಿತರಾದ ಪ್ರೇಷಿತರು ಮೈಕೊಡವಿ ಎದ್ದು ಯೇಸುಕ್ರಿಸ್ತರ ಸಂದೇಶವನ್ನು ಸುತ್ತಮುತ್ತಲ ಪ್ರಾಂತಗಳಿಗೆ ಸಾರುವ ಸಂದರ್ಭದಲ್ಲಿ ಅವರಿಗಾಗುವ ಅನುಭವಗಳನ್ನು ತಿಳಿಸುವ, ಮತ್ತು ವಿಶೇಷವಾಗಿ ಪೇತ್ರ ಮತ್ತು ಪೌಲರು ಅನುಭವಿಸುವ ತೊಂದರೆಗಳ ವಿವರಗಳನ್ನೂ ಒಳಗೊಂಡ ಕೃತಿಯಾಗಿದೆ, 'ಪ್ರೇಷಿತರ ಕ್ರಿಯಾಕಲಾಪಗಳು'.  ಕಣ್ಣಾರೆ ನೋಡದ ಅನೇಕ ವಿವರಗಳನ್ನು ಮೊದಲ ಕೃತಿಯಲ್ಲಿ ಲೂಕನು ಕಲೆಹಾಕಿದರೆ; ಪೌಲ, ಬಾರ್ನಬ, ಮಾರ್ಕ ಮುತಾದವರೊಡನೆ ಸೇರಿ ಸ್ವಯಂ ತಾನೂ ಸಹ ಭಾಗಿಯಾಗಿ ಶುಭಸಂದೇಶ ಸಾರಿದ ವಿವರಗಳನ್ನು ತನ್ನ ದ್ವಿತೀಯ ಕೃತಿಯಲ್ಲಿ ಸೇರಿಸಿದ್ದಾನೆ.

ತನ್ನ ಸುಸಂದೇಶವನ್ನು  ಉಳಿದವರ ಸುಸಂದೇಶಗಳಿಗಿಂತ ಭಿನ್ನವಾಗಿ ರಚಿಸಿದ ಲೂಕನು ಅದರಲ್ಲಿನ ಘಟನೆಗಳನ್ನು ಸಂಶೋಧಿಸಲೂ ಅನುಕೂಲವಾಗುವಂತೆ ಹಲವು ವಿವರಗಳನ್ನು ಸಂಗ್ರಹಿಸಿಕೊಟ್ಟಿದ್ದಾನೆ. ತುಂಬು ಗರ್ಭಿಣಿಯಾಗಿದ್ದ ಮೇರಿಯನ್ನು ಕರೆದುಕೊಂಡು ಜೋಸೆಫ್‌ ಜನಗಣತಿಯ ಸಲುವಾಗಿ ಬೆತ್ಲೆಹೆಮ್‌ಗೆ ಪ್ರಯಾಣಿಸುತ್ತಾನೆ. ಆದರೆ ಅದಕ್ಕಾಗಿ ಆಜ್ಞೆ ಹೊರಡಿಸಿದ್ದು ಆಗಿನ ಚಕ್ರವರ್ತಿ ‘ಔಗುಸ್ತಸ್‌ ಸೇಜ಼ರ್‌’ ಎಂಬುದನ್ನು ಕೃತಿಯಲ್ಲಿ ಸೂಚಿಸಿ ಕೃತಿಗೆ ವಿಶಿಷ್ಟ ಮೌಲ್ಯವನ್ನು ತಂದಿತ್ತಿದ್ದಾನೆ. ಮುಂದುವರಿದು 'ಮೊಟ್ಟಮೊದಲನೆಯ ಆ ಜನಗಣತಿ, ಕುರೇನ್ಯನು ಸಿರಿಯ ನಾಡಿಗೆ ರಾಜ್ಯಪಾಲನಾಗಿದ್ದಾಗ...'(೨:೨) ಎಂದು ಕುರೇನ್ಯನ ಹೆಸರನ್ನೂ ಸೂಚಿಸಿ,  ಅದು ಮೊಟ್ಟಮೊದಲನೆಯ ‘ಜನಗಣತಿ’ ಎಂಬುದನ್ನೂ ಸ್ಪಷ್ಟಪಡಿಸಿ ಕೃತಿಗೆ ಇನ್ನಷ್ಟು ನಿಖರತೆಯನ್ನು ನೀಡಿದ್ದಾನೆ. ಅಲ್ಲದೆ ಯೇಸುವು ಜನಿಸಿದ್ದು ಈ ಮೊಟ್ಟಮೊದಲ ಜನಗಣತಿಯ ವೇಳೆಯಲ್ಲಿ ಎಂಬುದನ್ನು ತಿಳಿಯಪಡಿಸಿ ಯಾವ ದಿನ, ಯಾವ ಘಳಿಗೆಯಲ್ಲಿ ಯೇಸು ಜನಿಸಿರಬಹುದು ಎಂಬ ಸುಳಿವನ್ನು ನೀಡಿದ್ದಾನೆ. ಅದೇ ರೀತಿಯಲ್ಲಿ ಮುಂದೆ ಸ್ನಾನಿಕ ಯೊವಾನ್ನನ ತಾರುಣ್ಯದ ಸಮಯದಲ್ಲಿ, 'ಆಗ ಬೆಂಗಾಡಿನಲ್ಲಿ ಜಕರೀಯನ ಮಗ ಸ್ನಾನಿಕ ಯೊವಾನ್ನನಿಗೆ ದೇವರ ಸಂದೇಶದ ಬೋಧೆಯಾಯಿತು', ಎಂದು ತನ್ನ ಕೃತಿಯಲ್ಲಿ ನಿರೂಪಿಸುತ್ತಾ, ಅದಕ್ಕೂ ಮೊದಲೇ, 'ಅದು ತಿಬೇರಿಯಸ್‌ ಚಕ್ರವರ್ತಿಯ ಆಡಳಿತದ ಹದಿನೈದನೆಯ ವರ್ಷ. ಆ ಕಾಲದಲ್ಲಿ ಜುದೇಯ ಪ್ರಾಂತಕ್ಕೆ ಪೊನ್ಸೆಯುಸ್‌(ಪೊಂತಿಯ) ಪಿಲಾತನು ರಾಜ್ಯಪಾಲನಾಗಿದ್ದನು. ಗಲಿಲೇಯ ಪ್ರಾಂತಕ್ಕೆ ಹೆರೋದನೂ ಇತುರೆಯ ಮತ್ತು ತ್ರಕೋನಿತಿ ಪ್ರಾಂತಗಳಿಗೆ ಇವನ ತಮ್ಮನಾದ ಫಿಲಿಪ್ಪನೂ ಮತ್ತು ಅಭಿಲೇನ ಪ್ರಾಂತಕ್ಕೆ ಲುಸಾನಿಯನೂ ಸಾಮಂತರಾಗಿದ್ದರು,' ಎಂದು ಆಗಿನ ಚಕ್ರವರ್ತಿ, ರಾಜ್ಯಪಾಲ ಮತ್ತು ಸಾಮಂತರ ಹೆಸರುಗಳನ್ನು ಉಲ್ಲೇಖಿಸಿದ್ದಾನೆ. ಅಲ್ಲದೆ 'ಆನ್ನನು ಮತ್ತು ಕಾಯಿಫನು ಅಂದಿನ ಪ್ರಧಾನ ಯಾಜಕರು' ಎಂಬದನ್ನೂ ಸೂಚಿಸಿದ್ದಾನೆ.

'ಪಿಲಾತ', 'ಹೆರೋದ', 'ಫಿಲಿಪ್ಪ', ಮತ್ತು 'ಆನ್ನ', 'ಕಾಯಿಫ'ರ ಹೆಸರುಗಳನ್ನು ಉಳಿದ ಸುಸಂದೇಶಗಳಲ್ಲೂ ಕಾಣಬಹುದಾದರೂ ಆ ಕೃತಿಗಳಲ್ಲಿ ಅವುಗಳನ್ನು ಸೂಚಿಸಿರುವ ಸಂದರ್ಭಗಳೇ ಬೇರೆ ಎಂಬುದನ್ನು ಗಮನಿಸಬೇಕಾಗಿದೆ. ಈ ಏಳು ಅಧಿಕಾರಿಗಳ ಉಲ್ಲೇಖದಿಂದಾಗಿ ಮತ್ತು 'ತಿಬೇರಿಯಸ್‌ ಚಕ್ರವರ್ತಿಯ ಹದಿನೈದನೆಯ ವರ್ಷದಲ್ಲಿ...' ಎಂಬ ಸುಳಿವಿನಿಂದಾಗ ಸ್ನಾನಿಕ ಯೊವಾನ್ನನ ಬೋಧನೆಯ ಆರಂಭಕಾಲ ಯಾವುದೆಂಬುದನ್ನು ನಿಖರವಾಗಿ ತಿಳಿಯಲು ಸಾಧ್ಯವಾಗುತ್ತದೆ. ಈ ನಿಖರತೆ ಉಳಿದ ಸುಸಂದೇಶಗಳಲ್ಲಿ ಕಾಣಬರುವುದಿಲ್ಲ. ಲೂಕನ ಉಲ್ಲೇಖಗಳಿಂದಲೇ ಸ್ನಾನಿಕ ಯೊವಾನ್ನನ ಸೇವಾವೃತ್ತಿಯ ಆರಂಭಕಾಲದಲ್ಲಿ ಅವರ ವಯಸ್ಸೆಷ್ಟಿರಬಹುದು ಎಂಬುದನ್ನು ಲೆಕ್ಕಹಾಕಲು ಸಾಧ್ಯವಾಗುತ್ತದೆ. ಹೆಚ್ಚೂ ಕಡಿಮೆ ಇದೇ ಸಂದರ್ಭದಲ್ಲೇ ಯೇಸು ಸಹ ತಮ್ಮ ಸೇವೆಯನ್ನೂ ಆರಂಭಿಸುವುದು.  ಆಗ ಅವರಿಬ್ಬರ ವಯಸ್ಸೂ ಹೆಚ್ಚೂಕಡಿಮೆ ಮೂವತ್ತು ವರ್ಷಗಳಾಗಿರಬಹುದು ಎಂಬುದನ್ನು ತಿಳಿಯಲು ಇದು ಸಹಕಾರಿಯಾಗುತ್ತದೆ.

ಮರಿಯಳನ್ನು ಜೋಸೆಫನು ವರಿಸುವ ಮೊದಲೇ ಆಕೆ ಪವಿತ್ರಾತ್ಮರಿಂದ ಗರ್ಭಿಣಿಯಾದಳು ಎಂಬ ವಿಚಾರ ಮತ್ತಾಯನ ಕೃತಿಯಿಂದ ತಿಳಿದುಬರುತ್ತದೆ. ಮತ್ತಾಯನನ್ನು ಹೊರತುಪಡಿಸಿದರೆ ಆ ಘಟನೆಯ ಬಗ್ಗೆ ವಿವರಗಳು ದೊರಕುವುದು ಲೂಕನ ಕೃತಿಯಲ್ಲೇ. ಈ ಘಟನೆಗೆ ಸುಸಂದೇಶಕರ್ತರು ಮಾತ್ರವಲ್ಲ ಯೇಸುವಿನ ಶಿಷ್ಯಂದಿರೂ ಸಾಕ್ಷಿಗಳಲ್ಲ. ಅದೇ ಕಾರಣಕ್ಕೆ ಮಾರ್ಕ ಮತ್ತು ಯೊವಾನ್ನರು ಈ ಬಗ್ಗೆ ತಮ್ಮ ಕೃತಿಗಳಲ್ಲಿ ಏನನ್ನೂ ತಿಳಿಸುವುದಿಲ್ಲ. ಅಲ್ಲದೆ ಇವರಿಬ್ಬರ ಕೃತಿಗಳು ಆರಂಭಗೊಳ್ಳುವುದೇ ಹಠಾತ್‌ ಸ್ನಾನಿಕ ಯೊವಾನ್ನನ ಪರಿಚಯದೊಂದಿಗೆ.  ಆದರೆ ಲೂಕನು ತನ್ನ ಕೃತಿಯಲ್ಲಿ, ಗಾಬ್ರಿಯಲ್‌ ದೂತನು ಮರಿಯಳಿಗಿತ್ತ ಸಂದೇಶವನ್ನು ಹೆಚ್ಚುವರಿಯಾಗಿ ಸೇರಿಸಿದ್ದಾನಲ್ಲದೇ ಇನ್ನಷ್ಟು ಹಿಂದಕ್ಕೆ ಹೋಗಿ ಸ್ನಾನಿಕ ಯೊವಾನ್ನನ ಮಾತಾಪಿತೃಗಳನ್ನೂ ಹೆಸರಿಸಿ, ದೂತನು ಅವರಿಗೂ ನೀಡಿದ ಸಂದೇಶವನ್ನೂ ವಿವರಿಸಿದ್ದಾನೆ. ಮೊದಲು ನಂಬದೇ ಹೋದ ಜಕರೀಯನಿಗೆ ಶಾಪವು ತಟ್ಟಿ, ಯೊವಾನ್ನನ ಜನನ ಮತ್ತು ಅವನಿಗೆ ಹೆಸರನ್ನಿಡುವ ದಿನಗಳವರೆಗೆ ಆತ ಮೂಕನಾಗಿಯೇ ಉಳಿಯುತ್ತಾನೆ. ಪ್ರಾಯಶಃ ಲೂಕನು ತನ್ನ ಕೃತಿಯ ರಚನೆಯ ಸಂದರ್ಭದಲ್ಲಿ, ಎಲಿಜಬೆತಳು ಮರಿಯಳನ್ನು ಭೇಟಿಯಾದ ಘಟನೆಯೂ ಸೇರಿದಂತೆ ಮೇಲಿನ ಎಲ್ಲಾ ಘಟನೆಗಳ ಕುರಿತಾಗಿ ಯೇಸುವಿನ ಮಾತೆ ಮರಿಯಳಿಂದ ಮತ್ತು ನಜರೇತಿನ ಸುತ್ತಮುತ್ತಲ ಪ್ರದೇಶದ ಜನರಿಂದ ಮಾಹಿತಿಗಳನ್ನು ಸಂಗ್ರಹಿಸಿರಬಹುದಾದ ಸಾಧ್ಯತೆಗಳಿವೆ. 

ಲೂಕನು ಮರಿಯಳನ್ನು ಸಂದರ್ಶಿಸಿದ್ದಾನೆ ಎನ್ನುವುದಕ್ಕೆ ಪೂರಕವಾಗುವ ಎರಡು ವಾಕ್ಯಗಳನ್ನು ಲೂಕನ ಕೃತಿಯಲ್ಲಿಯೇ ಗಮನಿಸಬಹುದು. ದೇವದೂತರು ಕುರಿಗಾಹಿಗಳಿಗೆ ಸಂದೇಶವನ್ನು ನೀಡಿದ ಮೇಲೆ ಜಗದ್ರಕ್ಷಕ ಶಿಶುವನ್ನು ಅವರು ಕಾಣಲು ಬರುತ್ತಾರೆ. ಬಂದವರು ತಮಗೆ ದೂತ ಪರಿವಾರವು ಕಾಣಿಸಿಕೊಂಡ ಬಗ್ಗೆ ಮರಿಯ ಮತ್ತು ಜೋಸೆಫರಿಗೆ ತಿಳಿಯಪಡಿಸುತ್ತಾರೆ. ಆಗ, 'ಮರಿಯಳು ಈ ವಿಷಯಗಳನ್ನೆಲ್ಲಾ ಮನಸ್ಸಿನಲ್ಲಿಯೇ ಇಟ್ಟುಕೊಂಡು ಆಲೋಚಿಸುತ್ತಾ ಬಂದಳು'(೨:೧೯) ಎಂಬ ವಾಕ್ಯವನ್ನು ಉದ್ದೇಶಪೂರ್ವಕವಾಗಿ ಲೂಕನು ತನ್ನ ಕೃತಿಯಲ್ಲಿ ಸೇರಿಸಿದ್ದಾನೆ ಎಂಬುದು ಬೈಬಲ್‌ವಾಚಕರಿಗೆ ಅರಿವಾಗುತ್ತದೆ. ಇದೇ ರೀತಿಯಲ್ಲಿ, ಯೇಸುವು ಹನ್ನೆರಡನೆಯ ವಯಸ್ಸಿನಲ್ಲಿ ದೇವಾಲಯದಲ್ಲಿ ಕಳೆದುಹೋದಾಗ ಅವರನ್ನು ಹುಡುಕಿಕೊಂಡು ಬಂದ ಮಾತಾಪಿತೃಗಳಿಗೆ, ಅವರು ದೇವಾಲಯದ ಬೋಧಕರ ಮಧ್ಯೆ ಕುಳಿತು ಚರ್ಚಿಸುತ್ತಿರುವುದು ಕಂಡುಬರುತ್ತದೆ. ಆ ಘಟನೆಯ ವೇಳೆಯಲ್ಲೂ, 'ಈ ವಿಷಯಗಳನ್ನೆಲ್ಲಾ ತಾಯಿ ಮರಿಯಳು ತನ್ನ ಮನಸ್ಸಿನಲ್ಲಿ ಸಂಗ್ರಹಿಸಿಟ್ಟುಕೊಂಡಳು'(೨:೫೧) ಎಂದು ಲೂಕನು ತಿಳಿಸಿದ್ದಾನೆ. ಈ ಎರಡೂ ಸಂದರ್ಭಗಳಲ್ಲಿ ಕಾಣಬರುವ, 'ಆಲೋಚಿಸುತ್ತಾ ಬಂದಳು' ಮತ್ತು 'ಸಂಗ್ರಹಿಸಿಟ್ಟುಕೊಂಡಳು' ಎಂಬ ಪದಗಳು ಸ್ವಯಂ ತಾನೇ ಮರಿಯಳನ್ನು ಕಂಡು ಆಕೆಯ ಮನದಾಳದಲ್ಲಿದ್ದ ವಿಷಯಗಳನ್ನು ಸಂಗ್ರಹಿಸಿ ಬರೆದಿದ್ದೇನೆ, ಎಂಬ ಸೂಚನೆಯಾಗಿದೆ.

ಲೂಕನು ತನ್ನ ಕೃತಿಯನ್ನು ರಚಿಸುವ ಮೊದಲು ಪೌಲನ ಆಪ್ತವಲಯದಲ್ಲಿ ಒಬ್ಬನಾಗಿದ್ದ ಮಾರ್ಕನ ಮತ್ತು ಯೊವಾನ್ನನ ಸಹೋದರ ಜೇಮ್ಸನ ಟಿಪ್ಪಣಿಗಳನ್ನೂ ಓದಿರಬೇಕು; ಅವೂ ಸಹ ಲೂಕನ ಕೃತಿರಚನೆಗೆ ಪ್ರೇರೇಪಣೆಯಾಗಿರಬೇಕು. ಅಷ್ಟೇ ಅಲ್ಲದೆ ಮೊಟ್ಟಮೊದಲ ಸುಸಂದೇಶವಾದ ಮತ್ತಾಯನ ಕೃತಿಯು ಆ ಸಮಯದಲ್ಲೇ ರಚನೆಯಾಗಿದ್ದು ಅದರ ಹಸ್ತಪ್ರತಿ ಲೂಕನ ಕೈಸೇರಿರಬೇಕು. ಅದನ್ನೂ ಕೂಲಂಕಶವಾಗಿ ಅಭ್ಯಸಿಸಿ, ಲಭ್ಯವಾದ ಈ ಎಲ್ಲಾ ಮಾಹಿತಿಗಳಿಗೆ ಪೂರಕವಾಗುವ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನ್ನ ಕೃತಿರಚನೆಯನ್ನು ಕ್ರಮಬದ್ಧವಾಗಿ ಲೂಕನು ಮಾಡಿದ್ದಾನೆ. ಹಾಗೆಂದು ಅವನು ತನ್ನ ಕೃತಿಯ ಆರಂಭದಲ್ಲೇ ಹೇಳಿಕೊಂಡಿದ್ದಾನೆ. 

ಮತ್ತಾಯನ ಕೃತಿಯಲ್ಲಿನ ಅನೇಕ ಅಂಶಗಳು ಲೂಕನ ಕೃತಿಯಲ್ಲಿ ಇವೆ. ಮಾರ್ಕನ ಕೃತಿಯಲ್ಲಿರುವ ಅಂಶಗಳೂ ಲೂಕನ ಕೃತಿಯೊಂದಿಗೆ ಹೊಂದಾಣಿಕೆಯಾಗುತ್ತವೆ. ಆದರೆ ಮಾರ್ಕನ ಕೃತಿರಚನೆಯಾದ್ದದ್ದು ಮಾತ್ರ ಲೂಕನ ಕೃತಿಯ ನಂತರವೇ, ಅಂದರೆ ಕ್ರಿ.ಶ. ಸುಮಾರು ೬೦-೬೫ರಲ್ಲಿ. ಮತ್ತಾಯ ಮತ್ತು ಮಾರ್ಕನ ಕೃತಿಗಳ ನೆರಳು ಲೂಕನ ಕೃತಿಯ ಮೇಲಿದ್ದರೂ ಯೊವಾನ್ನನ ಕೃತಿಯೂ ಸೇರಿದಂತೆ ಮೂರೂ ಕೃತಿಗಳಲ್ಲಿಯೂ ಕಾಣಿಸದ ನಿಖರತೆ ಮತ್ತು ಚಾರಿತ್ರಿಕ ಅಂಶಗಳು ಲೂಕನ ಕೃತಿಯಲ್ಲಿ ಮಾತ್ರ ಕಂಡುಬರುತ್ತವೆ. ಇದೇ ಲೂಕನ ಕೃತಿಯ ಹೆಗ್ಗಳಿಕೆಯೂ ಹೌದು.

ಇದೇ ರೀತಿಯಲ್ಲಿ ಲೂಕನು ಇನ್ನೂ ಅನೇಕರನ್ನು ಸಂದರ್ಶಿಸಿ ಅನೇಕ ವಿವರಗಳನ್ನು ಪಡೆದು ತನ್ನ ಕೃತಿಯಲ್ಲಿ ಅಡಕಗೊಳಿಸಿದ್ದಾನೆ. ಸ್ನಾನಿಕ ಯೊವಾನ್ನನ ಕುರಿತೂ ಅನೇಕ ವಿವರಗಳನ್ನು ಸಂಗ್ರಹಿಸಿದ್ದಾನೆ. ಲೂಕನ ಜನನದ ಸಂದರ್ಭದಲ್ಲಿ ಮಗುವಿಗೆ ಹೆಸರನ್ನಿಡುವಾಗ ಏನು ಹೆಸರಿಡಬೇಕೆಂದು ಜಕರೀಯನ ಬಳಿ ಕೇಳಿಲಾಗಿ, ಮಾತನ್ನಾಡಲಾಗದ ಜಕರೀಯನು ಹಲಗೆಯೊಂದನ್ನು ತರಿಸಿಕೊಂಡು ಅದರ ಮೇಲೆ 'ಯೊವಾನ್ನ' ಎಂದು ಬರೆಯುತ್ತಾನೆ. ಅದೇ ಘಳಿಗೆಯಲ್ಲಿ ಅವನ ನಾಲಿಗೆಯು ಸಡಿಲವಾಗಿ ಅವನು ಮಾತನಾಡಲು ಆರಂಭಿಸುತ್ತಾನಲ್ಲದೆ, ದೇವರಿಗೆ ಸ್ತುತಿಯನ್ನು ಸಲ್ಲಿಸುತ್ತಾನೆ. ಈ ವಿವರಗಳನ್ನು ತನ್ನ ಕೃತಿಯಲ್ಲಿ ಸೇರಿಸಿದ ಲೂಕನು, 'ಕೇಳಿದವರೆಲ್ಲರೂ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, 'ಈ ಮಗು ಮುಂದೆ ಎಂಥವನಾಗುವನೋ!' ಎಂದುಕೊಂಡರು'(೧:೬೬) ಎಂಬುದಾಗಿ ಬರೆದಿದ್ದಾನೆ. ಇಲ್ಲಿಯೂ 'ಕೇಳಿದವರೆಲ್ಲರೂ...ಮನಸ್ಸಿನಲ್ಲಿಟ್ಟುಕೊಂಡು' ಎಂಬ ಪದಪ್ರಯೋಗ ಮಾಡಿ, ಅವರ ಅಂತರಾಳದಲ್ಲಿ ದಾಖಲೆಯಾದ ವಿಷಯಗಳನ್ನು ತಾನು ಸ್ವಯಂ ಸಂಗ್ರಹಿಸಿದ್ದೇನೆ ಎಂಬುದಾಗಿ ಸೂಚಿಸಿದ್ದಾನೆ.

ಪ್ರತಿ ಸುಸಂದೇಶದ ಕೃತಿಗಳಲ್ಲೂ ಇತರ ಕೃತಿಗಳಲ್ಲಿರದ ಮಾಹಿತಿಗಳು ಇರುವಂತೆಯೇ, ಲೂಕನ ಕೃತಿಯಲ್ಲೂ ಅನೇಕ ಹೊಸ ಮಾಹಿತಿಗಳು ಕಾಣಸಿಗುತ್ತವೆ; ಅವು: ಸ್ನಾನಿಕ ಯೊವಾನ್ನನ ಜನನದ ಕುರಿತು ಜಕರೀಯನಿಗೆ ಗಾಬ್ರಿಯೆಲ್‌ ದೂತನಿಂದ ದೊರೆತ ಮುನ್ಸೂಚನೆ, ಗಾಬ್ರಿಯೆಲ್‌ ದೂತನು ಮರಿಯಳಿಗೆ ಸಂದೇಶವಿತ್ತದ್ದು, ಎಲಿಜ಼ಬೆತಳು ಮರಿಯಳನ್ನು ಸಂಧಿಸಿದ್ದು, ಮರಿಯಳ ಸ್ತುತಿ, ಸ್ನಾನಿಕ ಯೊವಾನ್ನನ ಜನನ, ಜಕರೀಯನ ಪ್ರವಾದನೆ, ಕುರಿಗಾಹಿಗಳಿಗೆ ದೇವದೂತರು ನೀಡಿದ ಸಂದೇಶ, ಯೇಸುವಿನ ನಾಮಕರಣ, ದೇವಾಲಯದಲ್ಲಿ ಯೇಸುಬಾಲರ ಸಮರ್ಪಣೆ, ನಜರೇತಿಗೆ ಮರಳಿದ್ದು, ದೇವಾಲಯದಲ್ಲಿ ಯೇಸು ಕಾಣೆಯಾದದ್ದು, ಸುಖಪುರುಷರನ್ನು ಧಿಕ್ಕರಿಸಿದ್ದು, ವಿಧವೆಯ ಮಗನಿಗೆ ನೀಡಿದ ಜೀವದಾನ, ಲೋಕನೀತಿಯ ಹೋಲಿಕೆ, ಯೇಸುವಿನ ಕಾಲನ್ನು ತೊಳೆದ ಪತಿತೆ, ಯೇಸುವಿನ ಭಕ್ತೆಯರು, ಜೀವದ ಅಳಿವು ಉಳಿವಿನ ಬಗ್ಗೆ, ಯೇಸುವನ್ನು ಬರಗೊಳಿಸದ ಸಮಾರಿಯದವರು, ಎಪ್ಪತ್ತೆರಡು ಮಂದಿಯ ನಿಯೋಗ ಮತ್ತು ಅವರ ವರದಿ, ಸಹೃದಯವಂತ ಸಮಾರಿತನ ಸಾಮತಿ, ಮಾರ್ತಾ ಮತ್ತು ಮರಿಯಳು, ಪ್ರಾರ್ಥನೆಯ ಫಲ, ಮಾತೆಗಿಂತ ಮಿಗಿಲಾದವರು, ದಡ್ಡ ಧನಿಕನ ಸಾಮತಿ, ಸದಾ ಸಿದ್ಧರಾಗಿರಲು ಸೂಚನೆ, ಪಾಪಕ್ಕೆ ವಿಮುಖರಾಗಿರಲು  ಸೂಚನೆ, ಹಣ್ಣುಬಿಡದ ಅಂಜೂರದ ಸಾಮತಿ, ಗೂನಿಯನ್ನು ಗುಣಪಡಿಸಿದ್ದು, ಆರೋಗ್ಯ ಪಡೆದ ಜಲೋದರ ರೋಗಿ, ದೀನ ಸ್ಥಾನಮಾನ, ಧನ್ಯವಾದ ದಾನ, ಕಳೆದುಹೋದ ನಾಣ್ಯ, ದುಂದುಗಾರ ಮಗನ ಸಾಮತಿ, ಕುಯುಕ್ತಿಯುಳ್ಳ ಮೇಸ್ತ್ರಿಯ ಸಾಮತಿ, ಧನಿಕ ಮತ್ತು ಲಾಜ಼ರ್‌, ವಿಶ್ವಾಸದ ಶಕ್ತಿ, ದೇವರ ಸೇವಕರು, ಕುಷ್ಟರೋಗಿಯ ಕೃತಜ್ಞತೆ, ನಿರಂತರ ಪ್ರಾರ್ಥನೆಗೆ ಉಪಮೆ, ಫರಿಸಾಯ ಮತ್ತು ಸುಂಕದವನ ಪ್ರಾರ್ಥನೆ, ಮರವೇರಿದ ಜಕ್ಕಾಯ, ಜೆರುಸಲೇಮಿಗಾಗಿ ಕಂಬನಿ, ಕಲ್ಲಿನ ಮೇಲೆ ಕಲ್ಲು ಉಳಿಯದು, ಮುಂಜಾಗರೂಕತೆ, ನಾಯಕನು ಸೇವಕನಾಗಲಿ, ಆಪ್ತಶಿಷ್ಯರಿಗೆ ಸೂಕ್ತ ಸಂಭಾವನೆ, ಪಾತಕರಲ್ಲಿ ಒಬ್ಬನಂತೆ ಪರಿಗಣಿತರಾದ ಯೇಸು, ಹೆರೋದನ ಮುಂದೆ ಯೇಸು, ಇವರನ್ನು ಕ್ಷಮಿಸು ತಂದೆ, ಯೇಸುವಿನ ಶವಸಂಸ್ಕಾರ, ಮತ್ತು ಬೆಥಾನಿಯದಲ್ಲಿ ಸ್ವರ್ಗಾರೋಹಣ ಇತ್ಯಾದಿ.

ಯೇಸುವನ್ನು ಬಂಧಿಸಲು ಬಂದವರಲ್ಲಿ ಒಬ್ಬನ ಕಿವಿಯನ್ನು ಶಿಷ್ಯರಲ್ಲೊಬ್ಬನು ಕತ್ತರಿಸಿ ಹಾಕಿದ ಬಗ್ಗೆ ಉಳಿದ ಸುಸಂದೇಶಗಳಲ್ಲಿ ಮಾಹಿತಿಯಿರುವಂತೆಯೇ ಲೂಕನ ಕೃತಿಯಲ್ಲೂ ಇದೆ. ಆದರೆ, 'ಯೇಸುವು, "ಸಾಕು ನಿಲ್ಲಿಸಿ," ಎಂದು ಹೇಳಿ ಅವನ ಕಿವಿಯನ್ನು ಮುಟ್ಟಿ ಗುಣಪಡಿಸಿದರು,' ಎಂದು ಯೇಸುವಿನ ಸಹೃದಯತೆಯನ್ನು ಬಿಂಬಿಸುವ ಅಂಶವನ್ನು ತನ್ನ ಕೃತಿಯಲ್ಲಿ ಸೇರಿಸಿದ್ದು ಮಾತ್ರ ಲೂಕನೇ.

ಯೊವಾನ್ನನ 'ಸುಸಂದೇಶ` ರಚನೆಯಾಗುವ ಸುಮಾರು ನಲ್ವತ್ತು ವರ್ಷಗಳ ಮೊದಲೇ ರಚನೆಯಾದ ಲೂಕನ ಕೃತಿಯಲ್ಲಿ ಇತರ ಸುಸಂದೇಶಗಳಲ್ಲಿರುವ ಮಾಹಿತಿಗಳ ಜೊತೆಗೆ ಅನೇಕ ಹೊಸ ಮಾಹಿತಿಗಳೂ  ಸೇರ್ಪಡೆಗೊಂಡಿದ್ದು  ಈ ಕೃತಿಯು ಆಗಿನ ಸಂದರ್ಭಕ್ಕೆ ತಕ್ಕಂತೆ ಪರಿಪೂರ್ಣ ಕೃತಿಯೆನಿಸುತ್ತದೆ. ಆದರೆ ತನ್ನ ಕೃತಿಯ ರಚನೆಗೂ ಮೊದಲು ಮತ್ತಾಯನ ಕೃತಿಯಲ್ಲಿನ-ಜ್ಯೋತಿಶ್ಯಾಸ್ತ್ರಜ್ಞರು ಯೇಸುವನ್ನು ಕಾಣಲು ಬಂದದ್ದು, ಜೋಸೆಫ್‌ ಮತ್ತು ಮೇರಿಯು ಹೆರೋದನಿಗೆ ಹೆದರಿ ಈಜಿಪ್ತಿಗೆ ಪಲಾಯನ ಮಾಡಿದ್ದು, ಕೂಸುಗಳ ಕಗ್ಗೊಲೆ, ಹೆರೋದನ ಮರಣಾನಂತರ ನಜರೇತಿಗೆ ಹಿಂತಿರುಗಿದ್ದು, ಇತ್ಯಾದಿ ವಿವರಗಳನ್ನು  ಕೈಬಿಟ್ಟಿದ್ದಾನೆ. ಇದಕ್ಕೆ ಕಾರಣವೇನೆಂದು ತಿಳಿಯಬೇಕಾದರೆ ಅವನ ಕೃತಿಯಲ್ಲಿನ ಪೀಠಿಕೆಯನ್ನು ಓದಬೇಕು: 'ಸನ್ಮಾನ್ಯ ಥಿಯೊಫಿಲನೇ, ನಮ್ಮ ಮಧ್ಯೆ ನೆರವೇರಿರುವ ಘಟನೆಗಳ ವರದಿಯನ್ನು ಬರೆದಿಡಲು ಹಲವರು ಪ್ರಯತ್ನಿಸಿದ್ದಾರೆ. ಪ್ರಾರಂಭದಿಂದ ಕಣ್ಣಾರೆ ಕಂಡು ಶುಭಸಂದೇಶವನ್ನು ಸಾರಿದವರಿಂದಲೇ ನಾವು ಕೇಳಿದ ಘಟನೆಗಳಿವು. ನಾನು ಆಮೂಲಾಗ್ರವಾಗಿ ವಿಚಾರಿಸಿದ ಅವೆಲ್ಲವನ್ನು ನಿನಗೋಸ್ಕರ ಕ್ರಮಬದ್ಧವಾಗಿ ಬರೆಯುವುದು ಉಚಿತವೆಂದು ನನಗೂ ತೋರಿತು. ನಿನಗೆ ಉಪದೇಶಿಸಲಾಗಿರುವ ವಿಷಯಗಳು ಸತ್ಯವಾದುವೆಂದು ಇದರಿಂದ ನಿನಗೆ ಮನದಟ್ಟಾಗುವುದು'. ಎಂದು ಕೃತಿಯ ಆರಂಭದಲ್ಲಿ ತಿಳಿಸಿದ್ದಾನೆ. ಪ್ರಾಯಶಃ 'ಥಿಯೋಫಿಲ' ಎಂಬ ವ್ಯಕ್ತಿಯು ಲೂಕನ ಮುಖೇನ ಕ್ರೈಸ್ತಧರ್ಮ ಸ್ವೀಕರಿಸಿದ ಅತ್ಯಂತ ಗಣ್ಯನೋ, ರಾಜಪರಂಪರೆಯವನೋ ಆಗಿರಬೇಕು. 'ಸನ್ಮಾನ್ಯ' ಎಂಬ ಪದವು ಅತ್ಯಂತ ಗಣ್ಯ ಅಥವಾ ರಾಜಪರಂಪರೆಗೆ ಸೇರಿದ ವ್ಯಕ್ತಿಗಳಿಗೆ ಬಳಸಬಹುದಾದ ಪದ. ಆತನಿಗಾಗಿ ಅಥವಾ  ಆತನ ಕೋರಿಕೆಯ ಮೇರೆಗೆ ಲೂಕನು ಈ ಸುಸಂದೇಶವನ್ನು ರಚಿಸಿರಬೇಕು ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಆತನಿಗಾಗಿ ಅತ್ಯಂತ ಶ್ರದ್ಧೆಯಿಂದ ಕೃತಿಯಲ್ಲಿನ ಘಟನೆಗಳು ನಿಜಕ್ಕೂ ಸಂಭವಿಸಿರಬಹುದಾದ ಪ್ರದೇಶಕ್ಕೆ ತೆರಳಿ ಅಲ್ಲಿನ ಜನರನ್ನು ಕಂಡು ಅವರಿಂದ(ಅವರಲ್ಲಿ ಪ್ರೇಷಿತರೂ ಇದ್ದಾರೆ) ಕೇಳಿತಿಳಿದ ವಿಷಯಗಳ ಆಧಾರದ ಮೇಲೆ ಕೃತಿಯ ರಚನೆ ಮಾಡಿದ್ದಾನೆ. ಕೃತಿಯ ಪೀಠಿಕೆಯಲ್ಲೇ ಸೂಚಿಸಿರುವಂತೆ 'ಆಮೂಲಾಗ್ರವಾಗಿ ವಿಚಾರಿಸಿ', ಅರ್ಥಾತ್‌ ಆಳವಾಗಿ ಮತ್ತು ಆಧಾರಸಹಿತವಾಗಿ ತಿಳಿದ ಮಾಹಿತಿಗಳನ್ನು ಕೃತಿಯಲ್ಲಿ ಅಡಕಗೊಳಿಸಿರುವುದಾಗಿ ಲೂಕನು ತಿಳಿಸಿದ್ದಾನೆ. ಬಹುಶಃ ಲೂಕನು ಕೈಬಿಟ್ಟ ಸಂಗತಿಗಳಿಗೆ ಕಾರಣ ಸರಿಯಾದ ಆಧಾರಗಳು ದೊರಕದ ಕಾರಣವಿರಬೇಕು ಎಂದು ಊಹಿಸಬಹುದು.

ಮತ್ತಾಯ, ಮಾರ್ಕ, ಯೊವಾನ್ನರಂತೆ ಲೂಕನೂ ಸಹ ತನ್ನ ಕೃತಿಯಲ್ಲಿ ಎಲ್ಲೂ ಅದು ತನ್ನದೇ ಕೃತಿಯೆಂದು ಸೂಚಿಸಿಲ್ಲ. ಆದರೆ ಎಲ್ಲರ ಕೃತಿಗಳಲ್ಲೂ ಕಂಡುಬರುವ ಆಂತರಿಕ ಸಾಕ್ಷ್ಯಗಳೇ ಕೃತಿಯ ಲೇಖಕರು ಇಂತಹವರಿರಬಹುದು ಎಂದೂ ಊಹಿಸಲು ಕಾರಣವಾಗುತ್ತದೆ. ಉಳಿದವರ ಸುಸಂದೇಶಗಳಲ್ಲಿ ಇಲ್ಲದ; ಲೂಕನ ಕೃತಿಯಲ್ಲಿ ಮಾತ್ರವೇ ಕಾಣಲು ಸಿಗುವ ಅನೇಕ ವೈದ್ಯಕೀಯ ಪದಗಳ ಬಳಕೆ, ಗಿಡಮೂಲಿಕೆಗಳ ಹೆಸರು ಹಾಗೂ ಕೃತಿಯಲ್ಲಿ ಬರುವ ರೋಗಿಗಳ ರೋಗಲಕ್ಷಣಗಳ ವಿವರಗಳು ಕೃತಿಯನ್ನು ರಚಿಸಿದಾತ ಓರ್ವ ವೈದ್ಯ ಎನ್ನುವುದನ್ನು ಸ್ಥಿರೀಕರಿಸುತ್ತದೆ. ಉದಾಹರಣೆಗೆ, ಸಹೃದಯವಂತ ಸಮಾರಿತನು ಗಾಯಗೊಂಡ ವ್ಯಕ್ತಿಯ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನು ಹಚ್ಚಿ ಅವುಗಳಿಗೆ ಬಟ್ಟೆ ಕಟ್ಟಿದ, ಎಂಬ ವಿವರವಿದೆ. ಅಂತೆಯೇ ಯೇಸು ಸಿಮೋನ ಮತ್ತು ಅಂದ್ರೆಯನ ಮನೆಗೆ ಹೋದಾಗ ಸಿಮೋನ ಪೇತ್ರನ ಅತ್ತೆ ಜ್ವರದಿಂದ ಮಲಗಿದ್ದು, ಯೇಸು ಆಕೆಯ ಕೈಹಿಡಿದು ಎಬ್ಬಿಸಿದಾಗ ಆಕೆಯ ಜ್ವರವು ಬಿಟ್ಟುಹೋಯಿತು, ಎಂಬ ವಿವರವಿದೆ. ಮತ್ತಾಯ(೮:೧೪) ಮತ್ತು ಮಾರ್ಕ(೧:೩೦)ನ ಸುಸಂದೇಶಗಳಲ್ಲಿ ಆಕೆಯ ಜ್ವರವು ಕೇವಲ ಜ್ವರವಾಗಿ ಕಾಣಿಸುತ್ತದೆ. ಆದರೆ ಲೂಕನ ಕೃತಿ(೪:೩೮)ಯಲ್ಲಿ ಆಕೆ 'ವಿಷಮಶೀತ ಜ್ವರ'ದಿಂದ ನರಳುತ್ತಿದ್ದಳು ಎಂಬ ವಿವರವಿದೆ. ಸಮಾರಿತನು ಗಾಯಗೊಂಡು ಬಿದ್ದಿದ್ದವನ ಗಾಯಗಳಿಗೆ ತತಕ್ಷಣದ ವೈದ್ಯೋಪಚಾರಕ್ಕೆ ಸಿಗುವ ವಸ್ತುಗಳಾದ ಎಣ್ಣೆ ಮತ್ತು ದ್ರಾಕ್ಷಾರಸವನ್ನು ಬಳಸಿದನೆಂದು ತಿಳಿಸಲು ಮತ್ತು ಜ್ವರದಿಂದ ನರಳುತ್ತಿರುವವರ ಜ್ವರದ ಲಕ್ಷಣವನ್ನು ತಿಳಿದು ಅದೇನೆಂಬುದನ್ನು ಸ್ಪಷ್ಟವಾಗಿ ತಿಳಿಸಲು ಓರ್ವ ವೈದ್ಯನಿಗೆ ಮಾತ್ರವೇ ಸಾಧ್ಯ! ಇವೆಲ್ಲವೂ ಆ ಕೃತಿಯ ಕರ್ತೃ ಲೂಕನೆಂಬುದನ್ನು ಸೂಚಿಸುತ್ತವೆ.

ಮೂಲತಃ ವೈದ್ಯನೂ, ಚಿತ್ರಕಲಾವಿದನೂ ಆಗಿರುವ ಲೂಕ 'ಸುಸಂದೇಶ' ಮತ್ತು 'ಪ್ರೇಷಿತರ ಕ್ರಿಯಾಕಲಾಪಗಳು' ಎಂಬ ಎರಡು ಕೃತಿಗಳ ಮೂಲಕ ತಾನೊಬ್ಬ 'ಲೇಖಕ' ಮಾತ್ರವಲ್ಲ  ಬಹುಮುಖ ಪ್ರತಿಭಾಶಾಲಿ ಎಂಬುದನ್ನೂ ಸಾಬೀತುಪಡಿಸಿದ್ದಾನೆ.

ಲೂಕನು ತನ್ನ ೮೪ನೆಯ ವಯಸ್ಸಿನಲ್ಲಿ 'ಬೊಯೊಶಿಯ' ಎಂಬಲ್ಲಿ ದೈವಸಾನಿಧ್ಯವನ್ನು ಸೇರಿದನೆಂದು ಅಧಿಕೃತ ಮೂಲಗಳು ತಿಳಿಸುತ್ತವೆ. ಗ್ರೀಸ್‌ನ ಥೀಬ್ಸ್‌ ಎಂಬಲ್ಲಿ ಪತ್ತೆಯಾದ ಸಮಾಧಿಯಿಂದ ಲೂಕನ ಅವಶೇಷಗಳನ್ನು ತೆಗೆದು ಕ್ರಿ.ಶ. ೩೫೭ರಲ್ಲಿ ಕಾನ್‌ಸ್ಟಾಂಟಿನೋಪಲ್‌ಗೆ ವರ್ಗಾಯಿಸಲಾಯಿತೆಂದು ಕೆಲವು ಮೂಲಗಳು ತಿಳಿಸುತ್ತವೆ. ಅಂತೆಯೇ ಅವರ ದೇಹವನ್ನು ಪಾದ್ವ(ಇಟಲಿ)ದ ಸಂತ ಗಿಯಸ್ಟಿನಾ ಅಬ್ಬೆಯಲ್ಲಿಯೂ, ತಲೆಯನ್ನು ಪ್ರಾಗ್‌(ಜೆಕ್‌ ಗಣರಾಜ್ಯ)ನ ಸಂತ ವೈಟಸ್‌ ಪ್ರಧಾನಾಲಯದಲ್ಲೂ, ಎದೆಯ ಮೂಳೆಯೊಂದನ್ನು ಥೀಬ್ಸ್‌(ಗ್ರೀಸ್‌)ನ ಸಮಾಧಿಯಲ್ಲೂ ಇರಿಸಲಾಗಿದೆಯೆಂಬ ವಿವರಗಳು ದೊರಕುತ್ತವೆ.

ಹಸುವಿನ ಮುಗ್ಧತೆಯನ್ನು ಚಿಹ್ನೆಯಾಗಿಸಿಕೊಂಡಿರುವ ಸಂತ ಲೂಕನು ‘ಕಲಾವಿದರ’, ‘ಭೌತಶಾಸ್ತ್ರಜ್ಞರ’, ‘ಶಸ್ತ್ರಚಿಕಿತ್ಸಕರ’, ಮತ್ತು 'ವಿದ್ಯಾರ್ಥಿಗಳ' ಪಾಲಕ ಸಂತನಾಗಿದ್ದಾನೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ