ಗ್ಲೋರಿಯ ಪಾತ್ರಿ(Gloria Patri) ಪ್ರಾರ್ಥನೆ-1

'ಪಿತನ ಮತ್ತು ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ ಆಮೆನ್ '

ಇದು ಶಿಲುಬೆಯ ಗುರುತನ್ನು ಹಣೆ, ಎದೆ ಮತ್ತು ಭುಜಗಳ ಮೇಲೆ ಹಾಕುವ ಸಂಪ್ರದಾಯವಿರುವ ಒಂದು ಪುಟ್ಟ ಪ್ರಾರ್ಥನೆ. ಸಾಮಾನ್ಯವಾಗಿ ಜಗತ್ತಿನೆಲ್ಲೆಡೆ ಬಳಕೆಯಲ್ಲಿರುವ 'ಸ್ತುತಿ ಸಲ್ಲಿಕೆ'ಯ ಈ ಪ್ರಾರ್ಥನೆಯನ್ನು 'ಟ್ರಿನಿಟೇರಿಯನ್‌ ಫಾರ್ಮುಲಾ' ಎನ್ನಲಾಗುತ್ತದೆ, ಪುನರುತ್ಥಾನದ ಬಳಿಕ ಯೇಸುವು ತಮ್ಮ ಶಿಷ್ಯರಿಗೆ ಒಂದು ಆಜ್ಞಾಪನೆಯನ್ನು ನೀಡುತ್ತಾರೆ. 'ಪಿತನ, ಸುತನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ'(ಮತ್ತಾ28:19) ಎಂದು ತಮ್ಮ ಶಿಷ್ಯರನ್ನು ಧರ್ಮಪ್ರಸಾರ ಕಾರ್ಯಕ್ಕೆ ಅವರು ನಿಯೋಜಿಸುತ್ತಾರೆ. ಬಳಿಕ ಈ ವಾಕ್ಯವು ಕೊಂಚ ಪರಿಷ್ಕರಿಸಲ್ಪಟ್ಟು ಲತೀನ್‌ ಭಾಷೆಯಲ್ಲಿ ‘ಗ್ಲೋರಿಯ ಪಾತ್ರಿ’ ಎನ್ನಲಾಗುವ ಪುಟ್ಟ ಪ್ರಾರ್ಥನೆಗೆ ಮೂಲವಾಗುತ್ತದೆ,
ಲತೀನ್‌ ಭಾಷೆಯಲ್ಲಿ ಈ ಪ್ರಾರ್ಥನೆಯು ಹೀಗೆ ಹೇಳಲಾಗುತ್ತದೆ;

'Gloria Patri, et Filio, et Spiritui Sancto,
Sicut erat in principio, et nunc, et semper,
et in saecula saeculorum. Amen'

ಪೂರ್ವದ ಅಸ್ಸಿರಿಯನ್ ಚರ್ಚ್ ಮತ್ತು ಚಾಲ್ದಿಯನ್‌ ಕಥೋಲಿಕ ಚರ್ಚ್‌ಗಳವರು ಮೇಲ್ಕಂಡ ಪ್ರಾರ್ಥನೆಯನ್ನು ಚಾಲ್ದಿಯನ್‌ ಅರಾಮೈಕ್‌ ಭಾಷೆಯಲ್ಲಿ ಈ ಕೆಳಗಿನಂತೆ ಹೇಳುತ್ತಾರೆ;

Shouha tababa, W-brona, W-ruha dqudsha,
min’alam w’adamma L-’alam, Amen.

'ಗ್ಲೋರಿಯ ಪಾತ್ರಿ' ಪ್ರಾರ್ಥನೆಯನ್ನು ಆಂಗ್ಲ ಭಾಷೆಯಲ್ಲಿ ತರ್ಜುಮೆಗೊಳಿಸಿದ ಬಳಿಕ ಈ ಕೆಳಗಿನಂತೆ ಹೇಳಲಾಗುತ್ತಿದ್ದ ಸಂಪ್ರದಾಯವಿತ್ತು;

Glory be to the Father, and to the Son:
and to the Holy Ghost;
As it was in the beginning, is now, and ever shall be:
world without end. Amen.

ಕಾಲಾನಂತರ ಮೇಲಿನ ಪ್ರಾರ್ಥನೆಯಲ್ಲಿರುವ 'Ghost' ಪದವನ್ನು ಬದಲಾಯಿಸಿ 'Holy Spirit' ಎಂದು ಪರಿಷ್ಕರಿಸಿ ಹೇಳಲಾಗುತ್ತಿದೆ;

Glory to the Father, and to the Son:
and to the Holy Spirit;
As it was in the beginning, is now, and ever shall be:
world without end. Amen.

ಈ ಪ್ರಾರ್ಥನೆಯ ಕನ್ನಡ ಅವತರಣಿಕೆಯನ್ನು ಹೀಗೆ ಹೇಳಲಾಗುತ್ತಿದೆ;

ಪಿತನ ಮತ್ತು ಸುತನ ಮತ್ತು ಪವಿತ್ರಾತ್ಮನಿಗೆ
ಮಹಿಮೆಯಾಗಲಿ.
ಆದಿಯಲ್ಲಿ ಇದ್ದ ಹಾಗೆ ಈಗಲೂ, ಯಾವಾಗಲೂ,
ಯುಗಯುಗಾಂತರಕ್ಕೂ, ಆಮೆನ್.

ಈ ಸ್ತುತಿಯ ಪ್ರಾರ್ಥನೆಯ ಮೊದಲ ಸಾಲಿನ ಪದಗಳು ಮತ್ತಾಯನ ಸುಸಂದೇಶದಿಂದ ಆರಿಸಿದ ಪದಗಳಾಗಿವೆ. ಯೇಸು ತಮ್ಮ ಶಿಷ್ಯರನ್ನು ಕೊನೆಯ ಬಾರಿ ಗಲಿಲೇಯದ ಬಳಿಯ ಬೆಟ್ಟವೊಂದರ ಮೇಲೆ ಸಂದರ್ಶಿಸಿದಾಗ ಶಿಷ್ಯರಲ್ಲಿ ಕೆಲವರು ಅವರನ್ನು ಪೂಜಿಸುತ್ತಾರಾದರೂ ಉಳಿದವರು ಅವರನ್ನು ಸಂದೇಹಿಸುತ್ತಾರೆ. ಸಂದೇಹಿಸಿದವರ ಸನಿಹಕ್ಕೆ ನಡೆದ ಯೇಸು ಅವರ ಬಳಿ; "ಭೂಮಿಯಲ್ಲೂ ಸ್ವರ್ಗದಲ್ಲೂ ನನಗೆ ಸರ್ವಾಧಿಕಾರವನ್ನು ಕೊಡಲಾಗಿದೆ. ಆದ್ದರಿಂದ ನೀವು ಹೋಗಿ, ಸಕಲ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ; ಪಿತ, ಸುತ ಮತ್ತು ಪವಿತ್ರಾತ್ಮರ ನಾಮದಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ..." ಎಂದು ಆಜ್ಞಾಪಿಸುತ್ತಾರೆ(ಮತ್ತಾ 28:16-19). 'ಪಿತ, ಸುತ ಮತ್ತು ಪವಿತ್ರಾತ್ಮ' ಈ ಮೂವರ ಕುರಿತು ಬೈಬಲ್‌ನಲ್ಲಿ ಒಂದೇ ಕಡೆ ಉಲ್ಲೇಖಿಸಲ್ಪಟ್ಟಿರುವುದು ಮತ್ತಾಯನ ಸುಸಂದೇಶದಲ್ಲಿ ಮಾತ್ರವೇ!

ಪ್ರಾರ್ಥನೆಯ ದ್ವಿತೀಯಾರ್ಧದ 'ಆದಿ' ಪದಕ್ಕೆ ಮೂಲ ಯೊವಾನ್ನನ ಸುಸಂದೇಶದ ಮೊದಲ ವಾಕ್ಯ. ಆದಿಯಿಂದಲೂ ದೇವರಿದ್ದರು ಎನ್ನುವುದನ್ನು ಇದು ಸೂಚಿಸುತ್ತದೆ. ನಂತರದ, 'ಯಾವಾಗಲೂ' ಮತ್ತು 'ಯುಗಯುಗಾಂತರಕ್ಕೂ' ಎಂಬ ಪದಬಳಕೆಗಳು ಹೆಚ್ಚಾಗಿ ಪೌಲನು ಬರೆದ ನಿರೂಪಗಳಲ್ಲಿ ಕಾಣಿಸುತ್ತದೆ. ಪೌಲನು ರೋಮನರಿಗೆ ಬರೆದ ನಿರೂಪದಲ್ಲಿ, 'ಪ್ರಭುವಿಗೆ ಯುಗಯುಗಾಂತರಕ್ಕೂ ಸ್ತುತಿಸ್ತೋತ್ರ ಸಲ್ಲಲಿ'(ರೋಮ:11:36) ಎಂದು ಹೇಳಿದರೆ ಅದೇ ಪತ್ರದ ಅಂತ್ಯದಲ್ಲಿ, 'ಏಕೈಕ ದೇವರಿಗೆ ಯುಗಯುಗಾಂತರಕ್ಕೂ ಮಹಿಮೆ ಸಲ್ಲಲಿ' ಎಂದು ಬರೆಯುವ ಮೂಲಕ ಪತ್ರಕ್ಕೆ ಮುಕ್ತಾಯ ಹೇಳಲಾಗಿದೆ. ಗಲಾತ್ಯರಿಗೆ ಬರೆದ ನಿರೂಪದ ಪೀಠಿಕೆಯಲ್ಲೇ, ದೇವರಿಗೆ ಯುಗಯುಗಾಂತರಕ್ಕೂ ಸ್ತುತಿಸ್ತೋತ್ರ ಸಲ್ಲಲಿ!(ಗಲಾ. 1:5)' ಎಂದಿರುವುದನ್ನು ಗಮನಿಸಬಹುದು. ಹೀಗೆ ಎಫೆಸಿಯರಿಗೆ(3:21), ಹಾಗೂ 1ತಿಮೋಥೇಯನಿಗೆ ಬರೆದ (1:17) ನಿರೂಪಗಳಲ್ಲೂ ಈ ಸಂಪ್ರದಾಯ ಮುಂದುವರಿದಿರುವುದನ್ನು ಕಾಣಬಹುದು. ಫಿಲಿಪ್ಪಿಯರಿಗೆ ಬರೆದ ನಿರೂಪದಲ್ಲಿ ಕೊಂಚ ಭಿನ್ನವಾಗಿ, '...ದೇವರಿಗೆ ನಿರಂತರವೂ ಮಹಿಮೆ ಸಲ್ಲಲಿ!' ಎಂದಿರುವುದು ಗಮನ ಸೆಳೆಯುತ್ತದೆ. ಪೌಲನು ತನ್ನ ನಿರೂಪಗಳಲ್ಲಿ ಪಿತನಾದ ಸರ್ವೇಶ್ವರ ದೇವರನ್ನು ಮಹಿಮೆ ಪಡಿಸುತ್ತಾನೆ. ಯೊವಾನ್ನನಂತೂ, ತಾನು ಬರೆದ ಪ್ರಕಟಣೆ(5:13)ಯಲ್ಲಿ 'ಸಿಂಹಾಸನದಲ್ಲಿ ಕುಳಿತವನಿಗೆ, ಯಜ್ಞಕುರಿಮರಿಯಾದಾತನಿಗೆ ಸಲ್ಲಲಿ ಯುಗಯುಗಾಂತರಕ್ಕೆ ಘನಮಾನ, ಗೌರವ, ಪರಾಕ್ರಮ ಮತ್ತು ಮಹಿಮೆ' ಎನ್ನುವುದರ ಮೂಲಕ ತಾನು ಅತಿಯಾಗಿ ಪ್ರೀತಿಸಿದ ತನ್ನ ಅಚ್ಚುಮೆಚ್ಚಿನ ಗುರುವಿಗೆ ಮಹಿಮೆಯನ್ನು ಸಲ್ಲಿಸುತ್ತಾನೆ.

ಅತ್ಯಂತ ಜನಪ್ರಿಯವೂ ಹಾಗೂ ಜಗತ್ತಿನ ಎಲ್ಲೆಡೆಯೂ ಸಾಮಾನ್ಯವಾಗಿ ಬಳಸಲಾಗುತ್ತಿರುವ ಈ ಸ್ತುತಿಯ ಪ್ರಾರ್ಥನೆಯನ್ನು ಬೆಳಗೆದ್ದಾಗ, ರಾತ್ರಿ ಮಲಗುವಾಗ, ಊಟ ಮಾಡುವ ಮೊದಲು ವಾಡಿಕೆಯಂತೆ ಹೇಳುವ ಸಂಪ್ರದಾಯವಿದೆ. ಈ ಶಿಲುಬೆಯ ಗುರುತಿನ ಸ್ತುತಿಯ ಪುಟ್ಟ ಪ್ರಾರ್ಥನೆಯೊಂದಿಗೆ ಜನರು ತಮ್ಮ ದಿನನಿತ್ಯದ ಕೆಲಸಕಾರ್ಯಗಳನ್ನು ಆರಂಭಿಸುವುದೂ ಉಂಟು.  ಚುಟುಕಾದ ವಿಶೇಷ ಪ್ರಾರ್ಥನೆಯಾಗಿಯೂ ಇದನ್ನು ಹೇಳಲಾಗುತ್ತದೆ. ಕಾಲ ಸಮಯ ಸಂದರ್ಭಗಳ ಮಿತಿಗೆ ಒಳಪಡದ ಈ ಪ್ರಾರ್ಥನೆಯನ್ನು ಯಾವುದೇ ಸಂದರ್ಭದಲ್ಲೂ  ಬಳಸಬಹುದಾಗಿದೆ. ಸಾಮಾನ್ಯವಾಗಿ ಜಪಸರದ ವೇಳೆಯಲ್ಲಿ ಅಲ್ಲಲ್ಲಿ ಹಾಗೂ ವಿವಿಧ ಸಮಯಗಳಲ್ಲಿ ಹೇಳಲಾಗುವ ಪ್ರಾರ್ಥನೆಗಳ ಉಪಾಂತ್ಯವಾಗಿ ಇದನ್ನು ಭಾಗಶಃ ಅಥವಾ ಪೂರ್ಣವಾಗಿ ಬಳಸಲಾಗುತ್ತದೆ

ಈ ಪ್ರಾರ್ಥನೆಯನ್ನು ಕನ್ನಡದಲ್ಲಿ ವಿಶೇಷವಾಗಿ ರಚಿಸಲ್ಪಟ್ಟ

'ಪವಿತ್ರ ಶಿಲುಬೆಯ ಗುರುತಿನ ಮೂಲಕ ನಮ್ಮ ವೈರಿಗಳಿಂದ ನಮ್ಮನ್ನು ರಕ್ಷಿಸಿರಿ,
ನಮ್ಮ ಸರ್ವೇಶ್ವರ;'

ಎಂಬ ಪ್ರಾರ್ಥನೆಯ ಉಪಾಂತ್ಯವಾಗಿ
'ಪಿತನ ಮತ್ತು ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ ಆಮೆನ್‌' ಎಂದು ಹೇಳಲಾಗುತ್ತದೆ.

ಮೇಲಿನ ಪ್ರಾರ್ಥನೆಯನ್ನು ಚರ್ಚ್‌‌ನಲ್ಲಿ ನಡೆಸುವ ಬಲಿಪೂಜೆ, ಮನೆಗಳಲ್ಲಿ ನಡೆಸುವ ಪ್ರಾರ್ಥನೆಯ ಅಥವಾ ಜಪಸರದ ಆರಂಭ ಮತ್ತು ಅಂತ್ಯದಲ್ಲಿ ಹೇಳಲಾಗುತ್ತದೆ. ಕನ್ನಡದಲ್ಲಿರುವ ಈ ಪ್ರಾರ್ಥನೆಯ ಪೂರ್ವಾರ್ಧವು ಪ್ರಾದೇಶಿಕ ಕಲ್ಪನೆಯಾಗಿದ್ದು ನಮ್ಮ ದೇಶದಲ್ಲಿ ಮಾತ್ರ ಬಳಸಲಾಗುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ