ಪವಿತ್ರಾತ್ಮ(Holy Spirit)

ಸರ್ವೇಶ್ವರ ದೇವರ ಕ್ರಿಯಾತ್ಮಕ ಬಲ ಅಥವಾ ಆತ್ಮವೇ 'ಪವಿತ್ರಾತ್ಮ' ಎನ್ನಲಾಗುತ್ತದೆ ಒಂದು ಪಂಗಡ. ಕ್ರೈಸ್ತರ ತತ್ವ ಸಿದ್ದಾಂತಗಳ ಪ್ರಕಾರ ದೇವರು ಏಕ ಮಾತ್ರವಲ್ಲ, 'ತ್ರಿತ್ವ'. ಸರ್ವೇಶ್ವರ ದೇವರು ಅವರ ಸುತ ಯೇಸುವಿನೊಂದಿಗೆ ಪರಮತ್ರಿತ್ವದ ಮೂರನೆಯ ವ್ಯಕ್ತಿ(ಶಕ್ತಿ)ಯೇ ಪವಿತ್ರಾತ್ಮ.

ಈ ಶಕ್ತಿಯನ್ನು ಎಲ್ಲಾ ಸತ್ಕಾರ್ಯಗಳ ಪ್ರೇರಕ ಶಕ್ತಿ, ಆದ್ಯಚೈತನ್ಯ, ಕೆಲವೊಮ್ಮೆ 'ದೇವರಾತ್ಮ', 'ಪೋಷಕ ಶಕ್ತಿ' ಇತ್ಯಾದಿಯಾಗಿಯೂ ಹೇಳಲಾಗುತ್ತಿದೆ. ಯೋವೇಲನ ಗ್ರಂಥದಲ್ಲಿ, ತಮ್ಮ ಆತ್ಮವನ್ನು ಎಲ್ಲಾ ಮಾನವರ ಮೇಲೆ, ದಾಸದಾಸಿಯರ ಮೇಲೆ ಸುರಿಸುವುದಾಗಿ ಸರ್ವೇಶ್ವರ ದೇವರು ಹೇಳಿರುವುದಾಗಿ ತಿಳಿಸಲಾಗಿದೆ(2:29-30). ಅದರ ಪ್ರಭಾವದಿಂದಾಗಿ ಪುತ್ರಪುತ್ರಿಯರು ಪ್ರವಾದನೆ ಮಾಡುವರು; ಹಿರಿಯರು ಸ್ವಪ್ನಶೀಲರಾಗುವರು; ಯುವಕರಿಗೆ ದಿವ್ಯದರ್ಶನಗಳಾಗುವುವು ಎಂದೂ ಗ್ರಂಥದಲ್ಲಿ ಹೇಳಲಾಗಿದೆ. 'ಯೇಸುವನ್ನು ಪವಿತ್ರಾತ್ಮರು ಬೆಂಗಾಡಿಗೆ ಕರೆದೊಯ್ದರು. ಅಲ್ಲಿ ಅವರು ನಲ್ವತ್ತು ದಿನಗಳನ್ನು ಕಳೆದರು. ವೇಳೆಯಲ್ಲಿ ಸೈತಾನನು ಅವರನ್ನು ಪರಿಶೋಧಿಸಿದನು' ಎಂದು ಹೇಳುತ್ತದೆ ಮಾರ್ಕನ ಸುಸಂದೇಶ(1:12-13). ‘ಯೇಸುವು ಸ್ನಾನಿಕ ಯೊವಾನ್ನನಿಂದ ದೀಕ್ಷಾಸ್ನಾನ ಪಡೆಯುವಾಗ ಪವಿತ್ರಾತ್ಮರು ಪಾರಿವಾಳದ ರೂಪದಲ್ಲಿ ಅವರ ಮೇಲೆ ಇಳಿದು ಬಂದರು’ ಎಂದು ಹೇಳುತ್ತದೆ ಮತ್ತಾಯ ಸುಸಂದೇಶ. ಮಾರ್ಕ ಮತ್ತು ಲೂಕ ಸುಸಂದೇಶಗಳು ಇದನ್ನು ಪುಷ್ಟೀಕರಿಸುತ್ತದೆ(ಮತ್ತಾಯ 3:13-17; ಮಾರ್ಕ 1:9-11; ಲೂಕ 3:21-22). ಅಲ್ಲದೆ, ನರಪುತ್ರನ ವಿರುದ್ಧ ಆಡುವ ದೂಷಣೆಗೆ ಕ್ಷಮೆಯುಂಟು; ಆದರೆ ಪವಿತ್ರಾತ್ಮನ ವಿರುದ್ಧ ಆಡುವ ದೂಷಣೆಗೆ ಕ್ಷಮೆಯೇ ಇಲ್ಲ, ಎಂಬುದಾಗಿ ಯೇಸು ಹೇಳಿದ ಮಾತುಗಳು ಮತ್ತಾಯ ಗ್ರಂಥದಲ್ಲಿ ದಾಖಲಾಗಿವೆ(12:31-32).

''ಪಿತನು ನಿಮಗೆ ಬೇರೊಬ್ಬ ಪೋಷಕನನ್ನು ಕೊಡುವನು. ಇವರು ನಿಮ್ಮೊಡನೆ ಯಾವಾಗಲೂ ಇರುವರು. ಸತ್ಯಸ್ವರೂಪಿಯಾದ ಪವಿತ್ರಾತ್ಮನೇ ಪೋಷಕ," ಎಂದು ಯೇಸು ತಮ್ಮ ಶಿಷ್ಯರಿಗೆ ಬೋಧಿಸಿದ ಕುರಿತು ಯೊವಾನ್ನ ಕೃತಿಯಲ್ಲಿ ದಾಖಲಾಗಿದೆ(14:16-17). ಯೇಸು ಪುನರುತ್ಥಾನ ಹೊಂದಿದ ಬಳಿಕ ಮೃತನಾದ ಇಸ್ಕಾರಿಯೋತ ಯೋದನ ಸ್ಥಾನದಲ್ಲಿ ಮತ್ತೀಯನನ್ನು ಶಿಷ್ಯರು ಸಭೆ ಸೇರಿ ಆಯ್ಕೆಮಾಡಿದ ಬಳಿಕ ಪಂಚಾಶತ್ತಮ ಹಬ್ಬದ ದಿನದಂದು ಒಂದೇ ಸ್ಥಳದಲ್ಲಿ ಸಭೆ ಸೇರಿದ್ದ ಭಕ್ತವಿಶ್ವಾಸಿಗಳ ಮೇಲೆ ಬೆಂಕಿಯ ರೂಪದಲ್ಲಿ ಪವಿತ್ರಾತ್ಮನು ಇಳಿದು ಬಂದನು ಎಂಬ ವಿವರಣೆ ಪ್ರೇಷಿತರ ಕ್ರಿಯಾಕಲಾಪಗಳು ಕೃತಿಯಲ್ಲಿದೆ ಅಲ್ಲದೆ ಸಭೆಯಲ್ಲಿ ಯೇಸುವಿನ ಮಾತೆ, ಸಹೋದರರೂ ಸೇರಿದಂತೆ ಯೇಸುವಿನ ಹನ್ನೊಂದು ಜನ ಶಿಷ್ಯರೂ ಉಪಸ್ಥಿತರಿದ್ದರು ಎಂದೂ ಹೇಳುತ್ತದೆ. ಇವರೆಲ್ಲರ ಸಂಖ್ಯೆ ಸುಮಾರು ನೂರಿಪ್ಪತ್ತು(ಪ್ರೇಷಿತ 2:1-4). 'ನಿಮ್ಮಲ್ಲಿ ನಿಜವಾಗಿಯೂ ದೇವರ ಆತ್ಮವು ನೆಲೆಸಿದ್ದರೆ ನೀವು ಶರೀರ ಸ್ವಭಾವಕ್ಕೆ ಅನುಸಾರವಾಗಿ ಜೀವಿಸದೆ ಪವಿತ್ರಾತ್ಮರ ಚಿತ್ತಕ್ಕೆ ಅನುಸಾರವಾಗಿ ಜೀವಿಸುತ್ತೀರಿ' ಎಂದು ಬರೆದಿದ್ದಾನೆ ಸಂತ ಪೌಲನು ರೋಮನರಿಗೆ(8:9)ಬರೆದ ಪತ್ರದಲ್ಲಿ. ಅಲ್ಲದೆ ಅದೇ ಅಧ್ಯಾಯದಲ್ಲಿ ಪವಿತ್ರಾತ್ಮನಿಗೆ ಅಧೀನವಾದ ಬದುಕಿನ ಬಗ್ಗೆಯೂ ವಿವರಿಸಿದ್ದಾನೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ