ಈಡನ್‌ ತೋಟ

 ಪ್ರಥಮ ಮಾನವರಾದ ಆದಂ ಮತ್ತು ಏವಳನ್ನು ಸೃಷ್ಟಿಸಿದ ದೇವರು ಅವರಿಗೆ ನೆಲೆ ನಿಲ್ಲಲು ಈಡೆನ್ ತೋಟದಲ್ಲಿ ಅವಕಾಶ ನೀಡಿದ್ದರು. ಬಳಿಕ ಅಪ್ರಾಮಾಣಿಕರಾದ ಅವರನ್ನು ಈಡನ್‌ ತೋಟದಿಂದ ಹೊರತಳ್ಳಿದರು ಎಂಬುದು ಯೆಹೂದ್ಯ, ಕ್ರೈಸ್ತ ಮತ್ತು ಮುಸ್ಲಿಂ ಜನಾಂಗವು ನಂಬಿರುವ ಸಂಗತಿ. ಆದರೆ ನಿಜಕ್ಕೂ ಈಡೆನ್ ತೋಟ ಭುವಿಯಲ್ಲಿತ್ತೇ? ಇದ್ದುದೇ ಆದರೆ ಅದು ಎಲ್ಲಿತ್ತು? ಈಗದರ ಸ್ಥಿತಿ ಏನಾಗಿದೆ? ಎಂಬ ಹಲವಾರು ಪ್ರಶ್ನೆಗಳು ನಮ್ಮನ್ನು ಮುತ್ತಿಕೊಳ್ಳುತ್ತವೆ.

'ಈಡೆನ್ ತೋಟ'ದ ಬಗ್ಗೆ ಹಲವಾರು ವರ್ಷಗಳಿಂದ ಚರ್ಚೆಗಳು, ನಡೆಯುತ್ತಾ ಬಂದಿವೆ; ಹಲವು ಪುರಾತತ್ವ ಶಾಸ್ತ್ರಜ್ಞರಿಂದ ಸಂಶೋಧನೆಗಳೂ ನಡೆದಿವೆ. ಆದರೆ ಈವರೆಗೂ ಅವರುಗಳಿಂದ ' ಈಡೆನ್ ತೋಟ'ವಿರುವ ಸ್ಥಳದ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ ಅಗೊಮ್ಮೆ ಈಗೊಮ್ಮೆ ಈ ತೋಟದ ಬಗ್ಗೆ ಅನೇಕ ಊಹಾಪೋಹಗಳು ಹರಡುವುದುಂಟು. ಆ ತೋಟವು ಭಾರತದಲ್ಲಿ ಇತ್ತು ಎಂದು ಕೆಲವರು ಹೇಳಿದರೆ. ಟಿಬೆಟ್‌ನ 'ಶಾಂಗ್ರಿಲಾ' ಎಂದು ಕರೆಯಲ್ಪಡುವ ಅಗೋಚರ ರಹಸ್ಯ ತಾಣವೇ ಅದೆಂದು ನಂಬಿದ ಜನರಿದ್ದಾರೆ. ಟರ್ಕಿಯ `ಅರಾರತ್' ಪರ್ವತಗಳ ಬಳಿ ಇತ್ತೆಂದು ವಾದಿಸುವವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಟೈಗ್ರಿಸ್ ಮತ್ತು ಯೂಪ್ರೆಟೀಸ್ ನದಿಗಳ ಸಂಗಮ ಸ್ಥಳದ ಬಳಿಯಯಲ್ಲೇ ಅದು ಇತ್ತು, ಈಗದು ಪರ್ಷಿಯನ್ ಕೊಲ್ಲಿಯಲ್ಲಿ ಮುಳುಗಿ ಹೋಗಿದೆಯೆಂದು ಸಾಕ್ಷ್ಯ ನೀಡುವ ಪ್ರಾಚ್ಯವಸ್ತು ಸಂಶೋಧಕರೂ ಇದ್ದಾರೆ. ಇದೆಲ್ಲವನ್ನೂ ಮೀರಿ ಅದೊಂದು ಕಾಲ್ಪನಿಕ ಸ್ಥಳ, ಭುವಿಯಲ್ಲಿ ನಿಜಕ್ಕೂ ಅದು ಇರಲೇ ಇಲ್ಲ ಎನ್ನುವವರ ಕೊರತೆಯೇನೂ ಇಲ್ಲ

ಪ್ರಸ್ತುತ 'ಈಡೆನ್' ಪದವು, ಮೆಸೊಪೊಟೇಮಿಯಾ (ಈಗಿನ ಇರಾಕ್)ದ ದಕ್ಷಿಣದಲ್ಲಿ ನೆಲೆಗೊಂಡಿದ್ದ ಒಂದು ಜನಾಂಗದ ಭಾಷೆಯಾದ ಅಕ್ಕಾಡಿಯನ್‌ನ 'ಎಡಿನ್ನು' (ಮೂಲಪದ ಸುಮೇರಿಯನ್‌ನ -'ಎಡಿನ್') ಎಂಬ ಪದದಿಂದ ಉದ್ಭವಗೊಂಡ ಪದವಾಗಿದೆ. ಆ ಭಾಷೆಯಲ್ಲಿ ಅದರ ಅರ್ಥ, 'ಬಯಲು' 'ಮರಳುಗಾಡು' ಅಥವಾ 'ಹುಲ್ಲುಗಾವಲು' ಎಂದಾಗುತ್ತದೆ. ಬೈಬಲ್‌ನ ಬಹುತೇಕ ಭಾಗ ಬರೆಯಲ್ಪಟ್ಟದ್ದು ಹೀಬ್ರೂ ಭಾಷೆಯಲ್ಲಿ. 'ಈಡೆನ್' ಎಂಬುದು ಒಂದು ಹೀಬ್ರೂ ಪದ. ಇದರ ಅರ್ಥ 'ನಂದನವನ' ಅಥವಾ 'ಸ್ವರ್ಗ' ಎಂದಾಗುತ್ತದೆ. ಹಾಗಾದರೆ ಈ ಸ್ವರ್ಗೀಯ ತೋಟದ ಬಗ್ಗೆ ಬೈಬಲ್ ಏನನ್ನು ಹೇಳುತ್ತದೆಯೆಂದು ನೋಡೋಣ.

ಈಡೆನ್ ಸೀಮೆಯಲ್ಲಿ ಒಂದು ನದಿಯು ಹುಟ್ಟಿ ಆ ವನವನ್ನು ತೋಯಿಸುತ್ತಿತು. ಅದು ಅಲ್ಲಿಂದ ನಾಲ್ಕು ಉಪನದಿಗಳಾಗಿ ಕವಲೊಡೆದಿತ್ತು. ಮೊದಲನೆಯದರ ಹೆಸರು ಪೀಶೋನ್, ಅದು ಬಂಗಾರ ದೊರೆಯುವ ಹವೀಲ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ. ಆ ಪ್ರದೇಶದ ಬಂಗಾರವು ಅಮೂಲ್ಯವಾದದ್ದು. ಅಲ್ಲಿ ಬದೋಲಖ ಧೂಪವೂ, ಗೋಮೇಧಿಕದ ಅಮೂಲ್ಯ ರತ್ನವು ಸಿಕ್ಕುತ್ತದೆ. ಎರಡನೆಯ ನದಿಯ ಹೆಸರು ಗೀಹೋನ್, ಅದು ಕೂಷ್ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ. ಮೂರನೆಯ ನದಿಯ ಹೆಸರು ಟೈಗ್ರೀಸ್; ಅದು ಅಶ್ಯೂರ್ ದೇಶದ ಪೂರ್ವಕ್ಕೆ ಹರಿಯುವುದು. ನಾಲ್ಕನೆಯದು ಯೂಫ್ರೇಟೀಸ್ ನದಿ.

'ಈಡೆನ್ ಅನ್ನುವ ದೇಶ ಅಥವಾ ಪ್ರದೇಶದಲ್ಲಿ ಹುಟ್ಟಿದ ನದಿಯೊಂದು ಅಲ್ಲಿರುವ ತೋಟವನ್ನು ತೋಯಿಸುತ್ತಿತ್ತು' ಎನ್ನುತ್ತದೆ ಬೈಬಲ್. ಅದು ದೇಶ ಅಥವಾ ಪ್ರದೇಶವಾಗಿದ್ದಲ್ಲಿ ಸಾಕಷ್ಟು ವಿಶಾಲವಾಗಿರಬೇಕು. ಈಡೆನ್ ಸೀಮೆಯಲ್ಲಿ ಹುಟ್ಟಿದ ನದಿಯು ಆ ವನವನ್ನು ತೋಯಿಸುವುದಾದರೆ ಆ ನದಿಯ ಹೆಸರೇನು? ಯಾವ ನದಿ? ಎಂಬುದು ಬೈಬಲ್‌ನಿಂದ ತಿಳಿದು ಬರುವುದಿಲ್ಲ. ಮುಂದುವರಿದು ಆ ವನದಿಂದ ಅಥವಾ ತೋಟದಿಂದ ಆ ನದಿಯು ನಾಲ್ಕು ನದಿಗಳಾಗಿ ಕವಲೊಡೆದಿತ್ತು ಎನ್ನುತ್ತದೆ. ಆ ನಾಲ್ಕು ಉಪನದಿಗಳ ಹೆಸರು 'ಪೀಶೋನ್, ಗೀಹೋನ್, ಟೈಗ್ರಿಸ್ ಮತ್ತು ಯೂಪ್ರಟೀಸ್' ಎನ್ನುತ್ತದೆ ಬೈಬಲ್. 

ಪ್ರಸ್ತುತ, ಈ ನಾಲ್ಕು ನದಿಗಳಲ್ಲಿ ಯೂಪ್ರಟೀಸ್ ಮತ್ತು ಟೈಗ್ರಿಸ್ ನದಿಗಳು ಟರ್ಕಿಯ ಈಶಾನ್ಯ ಭಾಗದ ಪರ್ವತ ಶ್ರೇಣಿಗಳಲ್ಲಿ ಹುಟ್ಟುತ್ತವೆ. ಈ ಪರ್ವತಗಳ ಸಮೀಪವೇ ಜಲಪ್ರಳಯದ ನೀರು ತಗ್ಗಿದ ಬಳಿಕ ನೋಹನು ಸೃಷ್ಟಿಸಿದ ಬೃಹತ್ ನೌಕೆಯು ತಂಗಿದ್ದ ಸ್ಥಳವಾದ 'ಅರಾರತ್' ಪರ್ವತವಿರುವುದು. ಇಲ್ಲಿ ಹುಟ್ಟಿದ ಎರಡು ನದಿಗಳೂ ಸಿರಿಯಾದ ಮೂಲಕ ಮೆಸೊಪೊಟೇಮಿಯಾ (ಈಗಿನ ಇರಾಕ್)ವನ್ನು ಪ್ರವೇಶಿಸಿ ಹರಿದು ಪರ್ಷಿಯನ್ ಕೊಲ್ಲಿಯಲ್ಲಿ ವಿಸರ್ಜಿತಗೊಳ್ಳುತ್ತವೆ. ಟೈಗ್ರಿಸ್ ನದಿಗೆ 'ಹಿದೆಕ್ಕಲ್' ಎಂಬ ಹೆಸರೂ ಸಹ ಇದ್ದು ಈ ಹೆಸರೂ ಸಹ ಬೈಬಲ್‌ನಲ್ಲಿ ಲಿಖಿತವಾಗಿದೆ. ಈ ಎರಡೂ ನದಿಗಳು ಹುಟ್ಟುವ ಸ್ಥಳಗಳ ನಡುವಿನ ಅಂತರ ಕೇವಲ 30ಕಿ.ಮೀ. ಅಂದರೆ ಈ ನದಿಗಳು ಹುಟ್ಟುವ ಸ್ಥಳಗಳ ಬಳಿಯೇ ಈಡೆನ್ ತೋಟವಿದ್ದಿರಬೇಕು ಅಥವಾ ಆ ಪ್ರದೇಶವೇ ಈಡೆನ್ ಆಗಿರಬೇಕು ಎಂದಾಯಿತಲ್ಲವೇ? ಹಾಗಾದರೆ ಉಳಿದ ನದಿಗಳಾದ ಪೀಶೋನ್ ಮತ್ತು ಗೀಹೋನ್ ನದಿಗಳು ಎಲ್ಲಿವೆ? ಅವುಗಳು  ಏನಾದವು? ಅಲ್ಲದೇ ಆ ವನವನ್ನು ತೋಯಿಸುತ್ತಿದ್ದ ನದಿ ಎಲ್ಲಿಂದ ಬರುತ್ತದೆ? ಎಂಬ ಮೂರು ಪ್ರಶ್ನೆಗಳು ಉತ್ತರವಿಲ್ಲದೆ ಹಾಗೆಯೇ ಉಳಿದು ಹೋಗುತ್ತವೆ. 

ಅದಿರಲಿ, 'ಪೀಶೋನ್' ಮತ್ತು 'ಗೀಹೋನ್' ನದಿಗಳು ಆಫ್ರಿಕಾದ ನೈಲ್ ನದಿ ಮತ್ತು ಭಾರತದ 'ಗಂಗಾ' ನದಿ ಎಂಬ ವಾದವನ್ನು ಕೆಲವು ಪಂಡಿತರು ಮಂಡಿಸಿದ್ದಾರೆ. 'ಏನಕೇನ ಸಂಬಂಧ?' ಎನ್ನುವಂತೆ, ಗಂಗಾ ನದಿ ಹುಟ್ಟುವುದು ಹಿಮಾಲಯ ಪರ್ವತಗಳ ಶ್ರೇಣಿಗಳಲ್ಲಿ, ಅದೂ ಏಷ್ಯಾ ಖಂಡದಲ್ಲಿ, ನೈಲ್ ನದಿಯ ಉಗಮವಾಗುವುದು ಆಫ್ರಿಕಾದ ದಟ್ಟವಾದ ಕಾನನಗಳ ನಡುವಿನ ಸರೋವರದಿಂದ. ಯೂಪ್ರಟೀಸ್ ಮತ್ತು ಟೈಗ್ರಿಸ್ ನದಿಗಳ ಹುಟ್ಟುವುದು ಟರ್ಕಿಯ ಪರ್ವತಗಳಲ್ಲಿ ಅಂದರೆ ಮಧ್ಯ ಪ್ರಾಚ್ಯದಲ್ಲಿ. ಏಷ್ಯಾ,  ಆಫ್ರಿಕಾ ಮತ್ತು ಟರ್ಕಿಗಳು ಇರುವುದು ಮೂರು ದಿಕ್ಕುಗಳಲ್ಲಿ. ಅಂದ ಮೇಲೆ ಈಡೆನ್ ತೋಟಕ್ಕೂ ಆ ನದಿಗಳಿಗೂ ಸಂಪರ್ಕ ಕಲ್ಪಿಸುವುದಾದರೂ ಹೇಗೆ? ಇಂತಹ ಕ್ಲಿಷ್ಟಕರ ಸಮಸ್ಯೆಯನ್ನು ಅರಿತು ಕೆಲವು ಸಂಶೋಧಕರು ಇದೊಂದು ಕಾಲ್ಪನಿಕ ತೋಟ ಎಂದು ಹೇಳಿ ಆ ವಾದಕ್ಕೆ ಮಂಗಳ ಹಾಡಿದರು.

ಇದಾದ ಕೆಲವು ವರ್ಷಗಳ ಬಳಿಕ ಒಮ್ಮೆಲೆ ಡಾ. ಜೂರಿಸ್ ಎಂಬ ಪುರಾತತ್ವಶಾಸ್ತ್ರಜ್ಞ, ಈಡೆನ್ ತೋಟವನ್ನು ತಾನು ಕಂಡು ಹಿಡಿದಿರುವುದಾಗಿ ಪ್ರಕಟಿಸಿದ. ಟೈಗ್ರಿಸ್ ಮತ್ತು ಯೂಪ್ರೆಟೀಸ್ ನದಿಗಳು ಸಂಗಮಿಸಿ ಪರ್ಷಿಯನ್ ಕೊಲ್ಲಿಗೆ ಸೇರುವಲ್ಲಿ ಅಂದರೆ ಕುವೈತ್‌ನ ಬಳಿ ಅದು ಇತ್ತೆಂದೂ ಪ್ರಸ್ತುತ ಪರ್ಷಿಯನ್ ಕೊಲ್ಲಿಯಲ್ಲಿ ಮುಳುಗಡೆಯಾಗಿ ಹೋಗಿದೆ ಎಂದು ಪ್ರಚುರಪಡಿಸಿದ. ಆತನ ಪ್ರಕಾರ ಟೈಗ್ರಿಸ್‌ ಮತ್ತು ಯೂಪ್ರೆಟೀಸ್‌ ನದಿಗಳು ಕುವೈತ್‌ನ ಬಳಿ ಸಂಗಮಿಸಿ ಪರ್ಷಿಯನ್‌ ಕೊಲ್ಲಿಯನ್ನು ಸೇರುತ್ತವೆ. ಅವು ಪರ್ಷಿಯನ್‌ ಕೊಲ್ಲಿಯನ್ನು ಸೇರುವ ಮೊದಲು ಇರಾನ್‌ನಿಂದ ಹರಿದು ಬಂದು ಟೈಗ್ರಿಸ್‌-ಯೂಪ್ರೆಟಿಸ್‌ ನದಿಗೆ ಸೇರುವ 'ಕಾರುನ್' ಎಂಬ ನದಿಯೇ ಬೈಬಲ್‌ನಲ್ಲಿ ಸೂಚಿಸಿರುವ 'ಗೀಹೋನ್' ನದಿಯೆಂದು ಹೇಳಿದ್ದಾನೆ. 'ಪಿಶೋನ್' ನದಿಯು ಬಂಗಾರ ದೊರೆಯುವ ಹವಿಲ ದೇಶವನ್ನು ಸುತ್ತಿ ಹರಿಯುತ್ತದೆ', ಎಂದು ಬೈಬಲ್‌ನ ಸೂಚನೆಯಿದೆ. 'ಹವಿಲ' ಎಂದು ಕರೆಯಲ್ಪಡುವುದು ಸೌದಿ ಅರೇಬಿಯಾದ ಒಂದು ಭಾಗ! ಅಲ್ಲಿ ಈ ನದಿ ಹರಿಯುತ್ತಿತ್ತು ಎನ್ನುವುದಕ್ಕೆ ಪುಷ್ಟಿ ಉಪಗ್ರಹಗಳಿಂದ ದೊರೆತಿದೆ ಎಂದು ಆತ ಹೇಳಿಕೊಂಡಿದ್ದಾನೆ. ಹಲವು ವರ್ಷಗಳ ಹಿಂದೆ ಈ ನದಿಯು ಹರಿದು ಬಂದು ಪರ್ಷಿಯನ್ ಕೊಲ್ಲಿಯನ್ನು ಸೇರುತ್ತಿತ್ತು. ಪ್ರಸ್ತುತ ಒಣಗಿ ಹೋಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಿರುವ 'ವಾದಿ ರಿಮಾಹ್' ಮತ್ತು 'ವಾದಿ ಬಾತಿನ್' ಎಂಬ ಕೊರಕಲುಗಳು ಪೀಶೋನ್ ನದಿಯ ಪಳೆಯುಳಿಕೆಗಳಾಗಿವೆ ಎಂದು ಡಾ. ಜೂರಿಸ್‌ 'ಈಡೆನ್‌ ತೋಟ'ದ ಕುರಿತಾಗಿ ತನ್ನ ವಾದವನ್ನು ಮಂಡಿಸಿದ್ದಾನೆ.

ಈ ಪುರಾತತ್ವ ಶಾಸ್ತ್ರಜ್ಞನ ಮಾತು ನಿಜವೇ ಆಗಿದ್ದರೆ, ಬೈಬಲ್ ವಾಕ್ಯಗಳನ್ನು ಪರಿಷ್ಕರಿಸಬೇಕಾಗಿ ಬರುತ್ತೆ. ಏಕೆಂದರೆ ಬೈಬಲ್‌ನ ಪ್ರಕಾರ, '...ನದಿಯೊಂದು ಹುಟ್ಟಿ ಆ ತೋಟವನ್ನು ತೋಯಿಸುತ್ತಿತ್ತು. ಅದು ಅಲ್ಲಿಂದ ನಾಲ್ಕು ಉಪನದಿಗಳಾಗಿ ಕವಲೊಡೆದಿತ್ತು...' ಎಂಬ ವಾಕ್ಯಗಳನ್ನು ಡಾ. ಜೂರಿಸ್‌ನ ತತ್ವಗಳು ಸಮರ್ಥಿಸುವುದಿಲ್ಲ. 

ಆದರೆ ಈ ವಾಕ್ಯಗಳಿಗೆ ಅನುಗುಣವಾದ ತಾಣವೊಂದಿದೆ. ಅದುವೇ ನೈಲ್ ನದಿಯ ಉಗಮ ಸ್ಥಳ ಎಂಬುದಾಗಿ ಇನ್ನೊಬ್ಬ ಪುರಾತತ್ವ ಶಾಸ್ತ್ರಜ್ಞ ಹೇಳಿಕೊಂಡಿದ್ದಾನೆ.

ನೈಲ್ ನದಿಯು ಜನ್ಮ ತಾಳುವುದು ಆಫ್ರಿಕಾದ ರುವಾಂಡ ಬಳಿಯ ದಟ್ಟ ಕಾನನಗಳ ನಡುವೆ ಇರುವ 'ವಿಕ್ಟೋರಿಯ ಸರೋವರ'ದಲ್ಲಿ. ಈ ವಿಶಾಲವಾದ ಸರೋವರದಿಂದ ಹೊರಕ್ಕೆ ಹರಿಯುವ ನದಿಯೇ ಜಗತ್ತಿನ ಅತಿ ಉದ್ದದ ನದಿಯಾದ 'ನೈಲ್' ನದಿ. ಈ ಸರೋವರಕ್ಕೆ ನೀರುಣಿಸುವುದು 'ಕಗೇರಾ' ಎಂಬ ನದಿ. ಇದರೊಂದಿಗೆ ಇತರ ಸಣ್ಣಪುಟ್ಟ ನದಿಗಳು ಬಂದು ಆ ಸರೋವರವನ್ನು ಸೇರುತ್ತದೆ. ಹಾಗಾಗಿ ವಿಕ್ಟೋರಿಯಾ ಸರೋವರದ ಸಮೀಪದಲ್ಲಿ ಎಲ್ಲೋ 'ಈಡೆನ್ ತೋಟ'ವಿದ್ದಿರಬೇಕು ಎಂದು ಆತ ಹೇಳಿಕೊಂಡಿದ್ದಾನೆ. ಚೋದ್ಯದ ಸಂಗತಿಯೆಂದರೆ ವಿಕ್ಟೋರಿಯಾ ಸರೋವರದಿಂದ ಹುಟ್ಟವುದು ನೈಲ್ ನದಿ ಮಾತ್ರವೇ. ಬೇರೆ ಕವಲುಗಳು ಅಲ್ಲಿಂದ ಉದ್ಭವಿಸುವುದಿಲ್ಲ. ಹಾಗಾಗಿ ಅಲ್ಲಿ 'ಈಡೆನ್ ತೋಟ' ಇತ್ತು ಎಂಬ ಕಲ್ಪನೆಯೇ ಅಸಂಗತವೆನಿಸುತ್ತದೆ.

ಇನ್ನು ಹಿಮಾಲಯದಲ್ಲಿರುವ 'ಶಾಂಗ್ರಿ-ಲಾ' ಎಂಬ ಅತೀಂದ್ರಿಯಕ್ಕೆ ಮಾತ್ರವೇ ಕಾಣಿಸುತ್ತದೆಯೆಂದು ಹೇಳಲಾಗುವ ಆಜ್ಞಾತಸ್ಥಳವೇ 'ಏಡೆನ್' ಆಗಿರಬೇಕೆಂದೂ ಹೇಳುವವರು ಇದ್ದಾರೆ. ಅದೇ ರೀತಿಯಲ್ಲಿ ಭಾರತ, ಇಥಿಯೋಪಿಯಾ, ಯು.ಎಸ್.ಎ., ಸೌದಿ ಅರೇಬಿಯಾ ಮುಂತಾದ ಸ್ಥಳಗಳನ್ನು ಉಲ್ಲೇಖಿಸುವ ಧರ್ಮಶಾಸ್ತ್ರಜ್ಞರೂ ಇದ್ದಾರೆ. ಆದರೆ ಅವರು ನೀಡುವ ಪುರಾವೆಗಳು ಅಸಮಂಜಸ.

ಅಂತಿಮವಾಗಿ ಈಡೆನ್ ತೋಟವನ್ನು ಕಂಡು ಹಿಡಿಯುವ ಸಲುವಾಗಿ ಒಂದು ಹೊಸ ತಂತ್ರವನ್ನೇ ಪ್ರಯೋಗಿಸಲಾಯಿತು; ಆದರೆ ಈ ಪ್ರಯೋಗವನ್ನು ಯಾರು, ಯಾವ ಆಧಾರದ ಮೇಲೆ ಪ್ರಯೋಗಿಸಿದರು ಎಂಬುದು ಇನ್ನೂ ತಿಳಿದುಬಂದಿಲ್ಲ.

ಆ ತಂತ್ರದ ಪ್ರಕಾರ; ಜೆರುಸಲೇಂನಿಂದ ಪಿತಾಮಹ ಅಬ್ರಹಾಮನ ನಾಡಾದ 'ಉರ್'ನ ನಡುವೆ ಒಂದು ಸರಳ ರೇಖೆಯನ್ನು ಎಳೆದು ಆ ಎರಡು ಬಿಂದುಗಳ ನಡುವಿನ ಅಂತರವನ್ನು ಅಳೆದರೆ ಸಿಗುವಂತಹ ದೂರ ಸುಮಾರು ಒಂಬೈನೂರಾ ನಲವತ್ತೈದು ಕಿಲೋಮೀಟರ್‌ಗಳಾಗುತ್ತವೆ. ಅವೆರಡು ಕೇಂದ್ರ ಬಿಂದುಗಳಿಂದ ಅದೇ ಅಳತೆಯಲ್ಲಿ, ಉತ್ತರಾಭಿಮುಖವಾಗಿ ಒಂದು ಬಿಂದುವನ್ನು ಸಂಧಿಸುವಂತೆ ಎರಡು ಸರಳರೇಖೆಗಳನ್ನು ಎಳೆದು ಸಮಭಾಹು ತ್ರಿಕೋನವೊಂದನ್ನು ಸೃಷ್ಟಿಸಿದರೆ ಹೊಸತಾಗಿ ಸೃಷ್ಟಿಯಾಗುವ ಮೂರನೆಯ ಕೇಂದ್ರ ಬಿಂದುವೇ 'ಈಡೆನ್ ತೋಟ'ವು ಇದ್ದಿರಬಹುದಾದ ಸ್ಥಳ! 

ಸೋಜಿಗದ ಸಂಗತಿಯೆಂದರೆ ಈ ಮೂರನೆಯ ಕೇಂದ್ರ ಬಿಂದು ಸೃಷ್ಟಿಯಾಗುವ ಸ್ಥಳ ಹೆಚ್ಚೂಕಡಿಮೆ ಟೈಗ್ರಿಸ್ ಮತ್ತು ಯೂಪ್ರಟೀಸ್ ನದಿಗಳ ಉಗಮ ಸ್ಥಳಗಳಿಗೆ ಸಮೀಪವೇ ಆಗುತ್ತದೆ. ಅಲ್ಲಿಗೆ ಹೆಚ್ಚೂ ಕಡಿಮೆ ಪರ್ಷಿಯನ್‌ ಕೊಲ್ಲಿಯಲ್ಲಿ ಮುಳುಗಿ ಹೋದ ಈಡನ್‌ ತೋಟವಿದ್ದಿರಬಹುದಾದ ಸ್ಥಳದ ಕುರಿತ ಮೊದಲನೆಯ ವಾದದ ಇನ್ನೊಂದು ಮಜಲಿನ ಬಳಿಗೆ ನಾವು ಬಂದು ತಲುಪಿದಂತಾಗುತ್ತದೆ. ಆದರೆ ಅಲ್ಲಿ ಉದ್ಭವವಾಗಿದ್ದ ಆ ಮೂರು ಪ್ರಶ್ನೆಗಳಿಗೆ ಇಲ್ಲಿ ಉತ್ತರವೇನು ಎಂದು ಪ್ರಶ್ನಿಸಿದರೆ ಸಿಗುವ ಉತ್ತರ 'ಜಲಪ್ರಳಯ'!

ಬಹುತೇಕರು ಇದನ್ನು ಪುಷ್ಟೀಕರಿಸುತ್ತಾರೆ. ನೋಹನ ಕಾಲದಲ್ಲಿ ಉಂಟಾದ ಜಲಪ್ರಳಯದಿಂದಾಗಿ ಭೂಮಿಯಲ್ಲಿ ಅನೇಕ ಬದಲಾವಣೆಗಳು ಆಗಿರಬಹುದಾದ ಸಾಧ್ಯತೆ ಇದೆ. ಇದ್ದ ನದಿಗಳಲ್ಲಿ ಕೆಲವು ಮಾಯವಾಗಿ ಅನೇಕ ಹೊಸ ನದಿಗಳು ಹುಟ್ಟಿರಬಹುದು. ಅಥವಾ ನದಿಗಳು ತಮ್ಮ ಪಾತ್ರವನ್ನೇ ಬದಲಾಯಿಸಿರಬಹುದು. ಇಂತಹ ಅನೇಕ ಘಟನೆಗಳು ಜಗತ್ತಿನಲ್ಲಿ ಈಗಾಗಲೇ ಸಂಭವಿಸಿವೆ. ಆದರೆ ಇದು ಬರಿ ನದಿಗಳಿಗೆ ಮಾತ್ರ ಅನ್ವಯಿಸುವ ವಿಷಯವಲ್ಲ. ಅನೇಕ ಕಾಡುಗಳು ಸಹ ನಾಶವಾಗಿರಬಹುದಾದ ಸಾಧ್ಯತೆಗಳಿವೆ. ಬೆಟ್ಟಗಳು ಕುಸಿದು ಹೋಗಿರಬಹುದು. ಸಮುದ್ರ ಸಾಗರಗಳಲ್ಲೂ ಅನೇಕ ವ್ಯತ್ಯಾಸಗಳಾಗಿರಬಹುದು; ಹೀಗೆಂದು ಹೇಳುತ್ತದೆ ಭೂಶಾಸ್ತ್ರ ವಿಭಾಗ. ಹಾಗಿದ್ದಲ್ಲಿ 'ಈಡೆನ್ ತೋಟ'ವೂ ಪ್ರಳಯಕ್ಕೆ ಸಿಲುಕಿ ನಾಶವಾಗಿರಬಹುದೇ? ಮನುಷ್ಯ ದೇವರಿಗೆ ಅವಿಧೇಯನಾಗಿ ನಡೆದು ತೋಟದಿಂದ ಹೊರದೂಡಲ್ಪಟ್ಟ ಮೇಲೆ ಆ ತೋಟದ ಇರುವಿಕೆಯ ಅವಶ್ಯಕತೆಯಾದರೂ ಏನು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ